ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿ ನಿವಾಸಿಗಳಾದ ಗಣಪಯ್ಯ ಗೌಡ ಹಾಗೂ ಮಗ ಸೋಮಶೇಖರ ಗೌಡರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ.
ನೆಲ್ಯಾಡಿ ಗ್ರಾಮದ ನಿವಾಸಿ ಅಣ್ಣು ಎಂಬವರು 22-2-2017ರಂದು ರಾತ್ರಿ ಮನೆಯಲ್ಲಿದ್ದ ಸಮಯ ನೆರೆ ಮನೆಯ ಗಣಪಯ್ಯ ಗೌಡ, ಮಗ ಸೋಮಶೇಖರ ಏಕಾಏಕಿಯಾಗಿ ಅಣ್ಣು ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೈ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದರೆಂದು ಆರೋಪಿಸಲಾಗಿತ್ತು.
ಗಾಯಗೊಂಡಿದ್ದ ಅಣ್ಣು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಹಳೆದ್ವೇಷದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಆರೋಪಿಸಿ ಅಣ್ಣು ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಗಣಪಯ್ಯ ಗೌಡ ಮತ್ತು ಅವರ ಮಗ ಸೋಮಶೇಖರ ವಿರುದ್ದ ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪನ ಪಟ್ಟಿ ಸಲ್ಲಿಸಿದ್ದರು.
ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಾದ ಗಣಪಯ್ಯ ಗೌಡ ಮತ್ತು ಅವರ ಮಗ ಸೋಮಶೇಖರ ಎಂಬವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ. ಆರೋಪಿಗಳ ಪರವಾಗಿ ಪುತ್ತೂರಿನ ‘ಕಜೆ ಲಾ ಛೇಂಬರ್ಸ್’ ಇದರ ಮುಖ್ಯಸ್ಥರಾದ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.
