ಅಸಮಾನ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರನ್ನು ಭಾದಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕು, ಜನಸಾಮಾನ್ಯರ ಬೇಡಿಕೆಗಳನ್ನು ಗಮನದಲ್ಲಿಟ್ಟು ಅಭಿವೃದ್ದಿಯೋಜನೆಗಳನ್ನು ರೂಪಿಸಬೇಕು ಎಂಬ ಆಗ್ರಹದೊಂದಿಗೆ “ಜನಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯ ಅಡಿಯಲ್ಲಿ ಡಿಸೆಂಬರ್ 8 ರಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ನಗರದ ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.00 ಕ್ಕೆ ಮೆರವಣಿಗೆ ಹೊರಡಲಿದ್ದು, 11.00 ಗಂಟೆಗೆ ಸರಿಯಾಗಿ ಕ್ಲಾಕ್ ಟವರ್ ಬಳಿ ಬಹಿರಂಗ ಸಭೆ ನಡೆಯಲಿದೆ.
ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಕೈಗಾರಿಕೆಗಳು, ಕೃಷಿ, ಮೀನುಗಾರಿಕೆಗೆ ಸಂಬಂಧಿಸಿ ಸ್ಥಳೀಯ ಜನತೆಯ ಹಿತಾಸಕ್ತಿಗಳನ್ನು ಎತ್ತಿಹಿಡಿಯಬೇಕು, ಜಿಲ್ಲೆಯ ಹೊಸ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡಬೇಕು, ಕಿದ್ವಾಯಿ, ಜಯದೇವ ಆಸ್ಪತ್ರೆಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು, ಆರೋಗ್ಯ ರಂಗದಲ್ಲಿ ಪಿ.ಪಿ.ಪಿ ಮಾದರಿಗೆ ಅವಕಾಶ ನೀಡಬಾರದು, ಜಿಲ್ಲೆಯ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕಡ್ಡಾಯಗೊಳಿಸಬೇಕು.
ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿ ಪಡಿಸುವುದು, ಬೇಕಾಬಿಟ್ಟಿ ಟೋಲ್ ಗೇಟ್ ಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದು, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ರಾಜ್ಯದ ಅನಿವಾಸಿ ಶ್ರಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದು, ಮಂಗಳೂರು ನಗರ ಸಹಿತ ರಸ್ತೆಗುಂಡಿಗಳನ್ನು ಮುಚ್ಚುವುದು, ಕೆಂಪುಕಲ್ಲು ದರ ಇಳಿಸುವುದು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದು, ಆದಿವಾಸಿಗಳು, ಅಲೆಮಾರಿಗಳು, ದಲಿತರು ಸೇರಿದಂತೆ ಕಳೆವರ್ಗಗಳ ಹಿತಾಸಕ್ತಿ ಕಾಪಾಡುವುದು, ಬೀಡಿ, ನಿರ್ಮಾಣ ವಿಭಾಗ ಸೇರಿದಂತೆ ಅಸಂಘಟಿತ ಕಾರ್ಮಿಕರ ಶೋಷಣೆಗೆ ಕಡಿವಾಣ ಹಾಕುವುದು ಮುಂತಾದ ವಿಷಯಗಳ ಜೊತೆಗೆ, ಅಭಿವೃದ್ದಿ ಎಂಬುದು ಸಮಾಜದ ಮೇಲ್ಪದರದಲ್ಲಿರುವ ಜನಗಳಿಗಷ್ಟೆ ಸೀಮಿತವಾಗದೆ ಸಮಸ್ತ ಜನವಿಭಾಗಗಳನ್ನು ಒಳಗೊಳ್ಳುವಂತೆ ಯೋಜನೆಗಳನ್ನು ರೂಪಿಸಬೇಕು ಎಂಬ ಆಗ್ರಹದೊಂದಿಗೆ ಸಿಪಿಐಎಂ ಪಕ್ಷವು ಬೃಹತ್ ರಾಲಿ, ಬಹಿರಂಗ ಸಭೆ ಹಮ್ಮಿಕೊಂಡಿದೆ.
ಶಿಕ್ಷಣ, ಆರೋಗ್ಯದ ಲಾಭಿಗಳು, ರಿಯಲ್ ಎಸ್ಟೇಟ್ ಮುಂತಾದ ದೊಡ್ಡ ಉದ್ಯಮಿಗಳ ಪರವಾಗಿ ಜಿಲ್ಲೆಯ ಆಳುವ ವರ್ಗ ರೂಪಿಸುತ್ತಿರುವ ಇಂದಿನ ಏಕಪಕ್ಷೀಯ ಅಭಿವೃದ್ಧಿಗೆ ಪರ್ಯಾಯವಾದ ಕಣ್ಣೋಟದೊಂದಿಗೆ, ಜನ ಸಾಮಾನ್ಯರ ಬದುಕು ಉತ್ತಮ ಗೊಳಿಸುವ ಉದ್ದೇಶದೊಂದಿಗೆ ನಡೆಯುತ್ತಿರುವ ಈ ಜನಾಗ್ರಹ ಕಾರ್ಯಕ್ರಮವನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.
