ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಪೊಲೀಸರ ಯಶಸ್ವಿ ಸಾಧನೆ; ಸಾವುಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ!

ರಾಜ್ಯ

ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಹಲವಾರು ಕ್ರಮಗಳನ್ನು ಅಳವಡಿಸಿಕೊಂಡ ನಂತರ, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಸಾವಿನ ಸಂಖ್ಯೆ 29 ಆಗಿತ್ತು, ಇದು ಆಗಸ್ಟ್‌ನಲ್ಲಿ 6ಕ್ಕೆ ಇಳಿದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಸಾವು-ನೋವುಗಳನ್ನು ಕಡಿಮೆ ಮಾಡಲು ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸಾವಿನ ಸಂಖ್ಯೆ ಮೇ ತಿಂಗಳಲ್ಲಿ 29, ಜೂನ್‌ನಲ್ಲಿ 28, ಜುಲೈನಲ್ಲಿ 8 ಮತ್ತು ಆಗಸ್ಟ್‌ನಲ್ಲಿ 6ಕ್ಕೆ ಇಳಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಯನ್ನು ಕಳೆದ ಮಾರ್ಚ್‌ ತಿಂಗಳಲ್ಲಿ ಪ್ರಧಾನಿ ಮೋದಿಯವರು ಅಧಿಕೃತವಾಗಿ ಉದ್ಘಾಟಿಸಿದಾಗಿನಿಂದ, ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು ಮತ್ತು ಅನೇಕ ಪ್ರಯಾಣಿಕರು ಹೆದ್ದಾರಿಯಲ್ಲಿ ಸಾವಿಗೀಡಾಗಿದ್ದರು. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಜೂನ್‌ನಲ್ಲಿ ಈ ಯೋಜನೆಯನ್ನು ಪರಿಶೀಲಿಸಿದರು ಮತ್ತು ಅಪಘಾತಗಳನ್ನು ತಡೆಯಲು ಹಲವಾರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.