ನಂಬಿದ ವಕೀಲರಿಂದಲೇ ಮೋಸ.! ಜಮೀನು ವಂಚನೆ ಪ್ರಕರಣ: ವಕೀಲರ ಸಹಿತ ಆರೋಪಿಗಳ ಮೇಲೆ ಪ್ರಕರಣ ದಾಖಲು.

ಕರಾವಳಿ

ಸುರತ್ಕಲ್: ಜಮೀನು ಮಾರಾಟದಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ಕ್ರಯಪತ್ರದ ಮೂಲಕ ಮಾರಾಟ ಮಾಡಲು ನೆರವು ನೀಡಿದ ಮತ್ತು ಅಕ್ರಮದಲ್ಲಿ ಭಾಗಿಯಾದ 14 ಮಂದಿ ಮೇಲೆ ಸೆನ್ ಪೊಲೀಸರು FIR ದಾಖಲು ಮಾಡಿದ್ದಾರೆ. ಮಂಗಳೂರ ನಗರದ ಗಂಗಾಧರ್ ಎಚ್. ಎಂಬವರು ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಕುಸುಮ ಕೆ. ಸುವರ್ಣ, ನೀರಜಾಕ್ಷಿ ಅಗರ್‌ವಾಲ್ ಮತ್ತು ಇತರ 11 ಮಂದಿ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದಾರೆ.

ಸುರತ್ಕಲ್ ಮುಂಚೂರಿನ ಕೆ. ರುಕ್ಮಯ್ಯ ಶೆಟ್ಟಿ ಅವರು ನೀಡಿದ ದೂರಿನ ಆದಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಕೀಲರಾದ ಗಂಗಾಧರ್ ಎಚ್. ಅವರು ರುಕ್ಮಯ್ಯ ಶೆಟ್ಟಿ ಅವರು ಆತ್ಮೀಯ ಸ್ನೇಹಿತರೂ ಆಗಿದ್ದರು. ಅವರದ್ದು ಕಟ್ಟಡ ನಿರ್ಮಾಣ ಮತ್ತು ಜಾಗದ ವ್ಯವಹಾರ. 2018ರಲ್ಲಿ ರುಕ್ಮಯ್ಯ ಶೆಟ್ಟಿ ಅವರು ಕುಸುಮ ಕೆ. ಸುವರ್ಣ, ವಾರಿಜಾ ವಿ. ಬಂಗೇರ ಮತ್ತು ಆಕೆಯ ಪುತ್ರಿ ನೀರಜಾಕ್ಷಿ ಅಗರ್‌ವಾಲ್ ಅವರಿಂದ ಹೊಸಬೆಟ್ಟು ಗ್ರಾಮದಲ್ಲಿ 60.45 ಲಕ್ಷ ರೂ.ಗಳಿಗೆ ಜಾಗ ಖರೀದಿಸುವ ಒಪ್ಪಂದ ಮಾಡಿಕೊಂಡು 20 ಲಕ್ಷ ರೂ. ಮುಂಗಡ ಹಣ ಪಾವತಿಸಿದ್ದರು.

ಈ ಜಾಗದಲ್ಲಿ ಕೆಲವು ಸೆಂಟ್ಸ್ ಗಳನ್ನು ನವೀನ್ ಸಾಲ್ಯಾನ್ ಮತ್ತು ಕೇತನ್ ಕುಮಾರ್ ಅವರಿಗೆ ಮಾರಾಟ ಮಾಡುವ ಬಗ್ಗೆಯೂ ಒಪ್ಪಂದ ಮಾಡಿಕೊಂಡು ಅವರಿಂದ ಮುಂಗಡ ಹಣವನ್ನೂ ಪಡೆದುಕೊಂಡಿದ್ದರು. ಈ ಮಧ್ಯೆ, ರುಕ್ಮಯ್ಯ ಶೆಟ್ಟಿ ಅವರು ಜಾಗದ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. 2020ರಲ್ಲಿ ರುಕ್ಮಯ್ಯ ಶೆಟ್ಟಿ ಅವರು ನರಸಂಬಂಧಿ ರೋಗಕ್ಕೆ ಒಳಗಾಗಿ ಸ್ಮರಣಶಕ್ತಿ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕುಟುಂಬ ಈ ಜಾಗದ ವ್ಯವಹಾರಕ್ಕೆ ವಕೀಲರನ್ನೇ ಅವಲಂಬಿಸಿತ್ತು.

ರುಕ್ಮಯ್ಯ ಶೆಟ್ಟಿಯವರು ಚೇತರಿಸಿಕೊಂಡ ನಂತರ ಅವರಿಗೆ ಗಂಗಾಧರ್ ಎಚ್. ಇತರ ಆರೋಪಿಗಳ ಜೊತೆ ಸೇರಿ ವಂಚನೆ ಮಾಡಿರುವುದು ಗಮನಕ್ಕೆ ಬಂದಿತು. ರುಕ್ಮಯ್ಯ ಶೆಟ್ಟಿ ಅವರು ಖರೀದಿಸಲು ಒಪ್ಪಂದ ಮಾಡಿಕೊಂಡ ಜಾಗವನ್ನು ಅವರ ಗಮನಕ್ಕೆ ತಾರದೆ ವಕೀಲರಾದ ಗಂಗಾಧರ್ ಎಚ್. ಹಾಗೂ ಇತರ ಆರೋಪಿಗಳು ಸೇರಿ ಹಲವರಿಗೆ ಜಾಗವನ್ನು ಮಾರಾಟ ಮಾಡಿದ್ಧಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ