ಸುರತ್ಕಲ್ ನಲ್ಲಿ ಬಿಜೆಪಿ ಅಡಳಿತದ ನಗರ ಪಾಲಿಕೆಯ ಅಧಿಕೃತ ಡೆಂಗಿ ಸೊಳ್ಳೆ, ಲಾರ್ವಾ ಉತ್ಪತ್ತಿ ಕೇಂದ್ರ

ಕರಾವಳಿ

ಪಾಳು ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಸ್ಥಿತಿ ಕಂಡು ಅಸಮಾಧಾನ, ಆಕ್ರೋಶಗೊಂಡಿರುವ ಇಲ್ಲಿನ ಜನತೆ “ಯಾರ ಕೆನ್ನೆಗೆ ಭಾರಿಸಬೇಕು” ಭರತ್ ಶೆಟ್ರೆ: ಮುನೀರ್ ಕಾಟಿಪಳ್ಳ

ದಕ್ಷಿಣ ಕನ್ನಡ ಜಿಲ್ಲೆ ಡೆಂಗಿಯಿಂದ ತತ್ತರಿಸಿದೆ. ಡೆಂಗಿ ಹರಡುವ ಸೊಳ್ಳೆಗಳು ಒಂದೆಡೆ ನಿಂತ ನೀರಿನಲ್ಲಿ ಉತ್ಪಾದನೆ ಆಗುತ್ತವೆ. ಲಾರ್ವಾ ಉತ್ಪಾದನೆ ಆಗುವ ಇಂತಹ ಸ್ಥಳಗಳನ್ನು ಗುರುತಿಸಿ ಅವುಗಳನ್ನು ನಾಶ ಪಡಿಸಬೇಕು ಎಂದು ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಪ್ರಕಟನೆಗಳ ಮೇಲೆ ಪ್ರಕಟನೆ ಹೊರಡಿಸುತ್ತಿದೆ. ಡೆಂಗಿ ಜ್ವರದ ಪ್ರಧಾನ ಕೇಂದ್ರವಾಗಿರುವ ಮಂಗಳೂರು ನಗರದಲ್ಲಿಯಂತೂ ಈ ಕುರಿತು ವರ್ಷಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಈಗಂತೂ ಮಂಗಳೂರು ನಗರ ಡೆಂಗಿ ಜ್ವರದಿಂದ ಬಳಲಿ ಹೋಗಿದೆ. ಬಿಜೆಪಿ ಆಡಳಿತದ ನಗರ ಪಾಲಿಕೆ ಈ ಕುರಿತು ಸಭೆ ನಡೆಸಿ ಡೆಂಗಿ ರೋಗ ಹರಡುವ ಸೊಳ್ಳೆ ಉತ್ಪಾದನೆ ಆಗುವ ಮಳೆ ನೀರು ನಿಲ್ಲುವ ಸಣ್ಣ ಪುಟ್ಟ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸುವ, ಲಾರ್ವಾ ಉತ್ಪತ್ತಿಗೆ ಅವಕಾಶ ನೀಡಿರುವ ಮನೆ, ವಸತಿ ಸಂಕೀರ್ಣ, ಕಟ್ಟಡ ನಿರ್ಮಾಣ ತಾಣಗಳನ್ನು ಪತ್ತೆ ಹಚ್ಚಿ ಮಾಲಕರಿಗೆ 500 ರೂಪಾಯಿಯಿಂದ 15,000 ರೂಪಾಯಿ ವರಗೆ ದಂಡ ವಿಧಿಸುವ ಕಠಿಣ ಕ್ರಮಗಳನ್ನು ಘೋಷಿಸಿದೆ.

ಅದರೆ, ಇದೇ ಬಿಜೆಪಿ ಆಡಳಿತದ ನಗರ ಪಾಲಿಕೆಯ ಅಧೀನದ ಸ್ಥಳಗಳಲ್ಲೇ ಡೆಂಗಿ ಸೊಳ್ಳೆಗಳ ಉತ್ಪತ್ತಿಯ ದೊಡ್ಡ ದೊಡ್ಡ ಲಾರ್ವಾ ಕೇಂದ್ರಗಳು ಎದ್ದು ಕಾಣುತ್ತಿವೆ. ಸುರತ್ಕಲ್ ನ ಹೃದಯ ಭಾಗದಲ್ಲಿ ಕಳೆದ ಏಳು ವರ್ಷಗಳಿಂದ ನಿರ್ಮಾಣ ಹಂತದಲ್ಲೆ ಪಾಲು ಬಿದ್ದಿರುವ ನಗರ ಪಾಲಿಕೆಯ ಮಾರುಕಟ್ಟೆ ಕಟ್ಟಡವಂತೂ ಪೂರ್ತಿಯಾಗಿ ಸುರತ್ಕಲ್ ಪಟ್ಟಣದ ಮಳೆ ನೀರು ಸಂಗ್ರಹಾಗಾರವಾಗಿ ಪರಿವರ್ತನೆ ಗೊಂಡಿದೆ. ವರ್ಷಗಳಿಂದ ಈ ಕುರಿತು ಗಮನ ಸೆಳೆದರೂ ನಗರ ಪಾಲಿಕೆ, ಜನಪ್ರತಿನಿಧಿಗಳು ಮಾರುಕಟ್ಟೆ ಕಟ್ಟ ಪೂರ್ಣಗೊಳಿಸಲು, ಕನಿಷ್ಟ ನೀರು ನಿಲ್ಲದಂತೆ ಮಾಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈಗಂತೂ ಈ ಕಟ್ಟಡದ ತಳ ಮಹಡಿ ಪೂರ್ತಿ ನೀರು ನಿಂತಿದ್ದು ಡೆಂಗಿ ಸೊಳ್ಳೆ,ಲಾರ್ವಾ ಉತ್ಪತ್ತಿಗೆ ನಗರ ಪಾಲಿಕೆ ಅಧಿಕೃತವಾಗಿ ತೆರೆದ ಕೇಂದ್ರದಂತೆ ಭಾಸವಾಗುತ್ತಿದೆ. ಸುರತ್ಕಲ್ ವ್ಯಾಪ್ತಿಯಲ್ಲಿ ಡೆಂಗಿ ಸಹಿತ ಸೊಳ್ಳೆಗಳಿಂದ ಹರಡುವ ವಿವಿಧ ಜ್ವರ, ಕಾಯಿಲೆಗಳ ಹಾವಳಿ ವಿಪರೀತವಾಗಿದೆ. ಈ ಪಾಳು ಬಿದ್ದಿರುವ ಮಾರುಕಟ್ಟೆ ಕಟ್ಟಡ ಪೂರ್ಣ ಪ್ರಮಾಣದ ಲಾರ್ವಾ ಉತ್ಪತ್ತಿ, ಡೆಂಗಿ ಸೊಳ್ಳೆ ಸಾಕಣಾ ಕೇಂದ್ರವಾಗಿರುವುದರಿಂದ ಹತ್ತಿರದ ಮೂಡಾ ಮಾರುಕಟ್ಟೆ, ಹಾಗೂ ಸುತ್ತಲಿನ ವಿವಿಧ ಕಟ್ಟಡಗಳ ವ್ಯಾಪಾರಸ್ಥರು ಸೊಳ್ಳೆಗಳ ಹಾವಳಿಯಿಂದ ಕಂಗೆಟ್ಟು ಭೀತಿಯಿಂದಲೇ ದಿನ ದೂಡುತ್ತಿದ್ದಾರೆ.

ಹೀಗಿರುತ್ತಾ, ನಾಗರಿಕರಿಗೆ ತಮ್ಮ ವ್ಯಾಪ್ತಿಯ ನೀರು ನಿಂತಲ್ಲಿ ದಂಡ ವಿಧಿಸಲು ಹೊರಟಿರುವ ನಗರ ಪಾಲಿಕೆ ತನ್ನದೇ ಕಟ್ಟಡಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಲಾರ್ವ ಉತ್ಪತ್ತಿಯಾಗುತ್ತಿರುವುದರ ಕುರಿತು ಕಣ್ಣು ಮುಚ್ಚಿ ಕೂತಿದೆ. ಈ ಲಾರ್ವಾ ಉತ್ಪತ್ತಿ ಕೇಂದ್ರದ ತೆರವಿಗೆ ಯಾವುದೇ ಕ್ರಮಗಳನ್ನು ಜರುಗಿಸಿಲ್ಲ. ಇಂತಹ ಅಪರಾಧಕ್ಕೆ ಬಿಜೆಪಿ ಆಡಳಿತ ಪಾಲಿಕೆಗೆ ದಂಡ ವಿಧಿಸುವುದು ಯಾರು ?

ಈ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹಾಗೂ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಈ ಸ್ಥಳಕ್ಕೆ ಜನರ ದೂರುಗಳ ಹೊರತಾಗಿ ಒಮ್ಮೆಯೂ ಭೇಟಿ ನೀಡಿಲ್ಲ. ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಶಾಸಕ ಭರತ್ ಶೆಟ್ಟಿ ಕೋಮು ಪ್ರಚೋದಕ ಮಾತು, ಕೃತಿಗಳಲ್ಲೇ ಮುಳುಗಿದ್ದು, ಅದಷ್ಟೆ ಮತಗಳಿಕೆಯ ರಾಜಕರಣ ಎಂದು ಭಾವಿಸಿದ್ದಾರೆ. ಜನರ ಬದುಕಿನ ಇಂತಹ ಗಂಭೀರ ಸಮಸ್ಯೆಗಳ ಕುರಿತು ಅವರಿಗೆ ಯಾವ ಕಾಳಜಿಯೂ ಇಲ್ಲ. ಶಾಸಕರ ಈ ನಡೆ ಅತ್ಯಂತ ಅಕ್ಷಮ್ಯ. ಕ್ಷೇತ್ರದ ಜನತೆ ಡೆಂಗಿ ರೋಗದಿಂದ ಕಂಗೆಟ್ಟಿರುವಾಗ ಅವರ ನೆರವಿಗೆ ಧಾವಿಸದ, ತನ್ನದೇ ವೈಫಲ್ಯದ ಕೂಸಾಗಿರುವ ಮಾರುಕಟ್ಟೆ ಕಟ್ಟಡದಲ್ಲಿ ನೀರು ನಿಲ್ಲದಂತೆ ಕನಿಷ್ಟ ಕ್ರಮಗಳನ್ನು ಕೈಗೊಂಡು ಡೆಂಗಿ ಸೊಳ್ಳೆಗಳು ಉತ್ಪಾದನೆಯಾಗದಂತೆ ತಡೆಯುವ ಯತ್ನ ನಡೆಸದ ಶಾಸಕ ಭರತ್ ಶೆಟ್ಟಿ ಕ್ಷೇತ್ರದ ಜನ ಪ್ರತಿನಿಧಿಯಾಗಿ ಮುಂದುವರಿಯುವ ಎಲ್ಲಾ ಅರ್ಹತೆ ಕಳೆದು ಕೊಂಡಿದ್ದಾರೆ.

ಕಳೆದ ಆರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು ಪಾಳು ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಕಟ್ಟಡ ಸ್ಥಿತಿಯನ್ನು ಕಂಡು ಅಸಮಾಧಾನ, ಆಕ್ರೋಶದಿಂದಿರುವ ಇಲ್ಲಿನ ಜನತೆ ಈ ತಪ್ಪಿಗೆ “ಯಾರ ಕೆನ್ನೆಗೆ ಭಾರಿಸಬೇಕು” ಎಂದು ಕೇಳಿದರೆ ಶಾಸಕ ಭರತ್ ಶೆಟ್ಟಿಯವರು ಏನೆಂದು ಉತ್ತರಿಸುತ್ತಾರೆ ?