ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ಹೆಸರಲ್ಲಿ ಲಂಚಕ್ಕೆ ಬೇಡಿಕೆ ಆರೋಪ; ಮಹಿಳಾ ನ್ಯಾಯವಾದಿಯ ವಿರುದ್ದ ಪ್ರಕರಣ ದಾಖಲು

ರಾಜ್ಯ

ಅಪರಾಧ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡುವ ಸಂಬಂಧ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕುರಿತು ಮಹಿಳಾ ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೈಕೋರ್ಟ್‌ನ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್‌ ಎಂ. ರಾಜೇಶ್ವರಿ ನೀಡಿದ ದೂರಿನ ಮೇರೆಗೆ ಹೈಕೋರ್ಟ್‌ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) 318 (4) ವಂಚನೆಯಡಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತನಾಗಿದ್ದ 24 ವರ್ಷದ ವಿಷ್ಣುದೇವನ್‌ಗೆ ಜಾಮೀನು ಸಿಗದೆ 3 ವರ್ಷಗಳಿಂದ ಜೈಲಿನಲ್ಲಿದ್ದ ಮಗನನ್ನು ಜಾಮೀನಿನ ಮೇಲೆ ಬಿಡಿಸುವ ಕುರಿತಂತೆ ತಾಯಿ ಥೆರೆಸಾ, ನ್ಯಾಯವಾದಿ ಮರೀನಾ ಫೆರ್ನಾಂಡಿಸ್‌ ಅವರನ್ನು ಭೇಟಿ ಮಾಡಿ ವಾದ ಮಂಡಿಸಿ ಜಾಮೀನು ಕೊಡಿಸಲು ಕೇಳಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಮರೀನಾ 10 ಲಕ್ಷ ರೂ. ಪಡೆದಿದ್ದರು. ಆದರೆ ಜಾಮೀನು ಕೊಡಿಸಲು ವಿಫ‌ಲವಾಗಿದ್ದರು. ಥೆರೆಸಾ ತಾನು ನೀಡಿದ್ದ ಹಣವನ್ನು ವಾಪಸ್‌ ಕೇಳಿದಾಗ ವಕೀಲೆ 9 ಲಕ್ಷ ರೂ. ಮೊತ್ತದ 3 ಚೆಕ್‌ ಮಾತ್ರ ನೀಡಿದ್ದರು. ಆದರೆ ಹಣ ಹಿಂದಿರುಗಿಸಲಿರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಥೆರೆಸಾ ಅವರು ಮತ್ತೆ ಹಣ ವಾಪಸ್‌ ಕೇಳಿದಾಗ ವಕೀಲೆ ಮರೀನಾ, ಆರತಿ ಎಂಬವರನ್ನು ಪರಿಚಯಿಸಿದ್ದರು. ತಮಗೆ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಪರಿಚಯವಿರುವುದಾಗಿ ಹೇಳಿ ಮರೀನಾ 72 ಸಾವಿರ ರೂ. ಪಡೆದಿದ್ದರು. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ಪರಿಚಯವಾದ ಮಹಿಳಾ ವಕೀಲೆ ದಯೀನಾಬಾನು ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಜಾಮೀನು ಕೊಡಿಸಲು 50 ಲಕ್ಷ ರೂ. ನಿರೀಕ್ಷಿಸುತ್ತಿದ್ದಾರೆ. ಹಣ ನೀಡಲು ಸಾಧ್ಯವಾಗದಿದ್ದರೆ ಜಾಮೀನು ಪಡೆಯಲು ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಿ ಎಂದು ಥೆರೆಸಾಗೆ ಹೇಳಿದ್ದರು ಎಂದು ಎಫ್‌ಐರ್‌ನಲ್ಲಿ ನಮೂದಿಸಲಾಗಿದೆ.