ಭಗವಾನ್ ಬಾಹುಬಲಿ ಮೂರ್ತಿಯ ಭಾವಚಿತ್ರವನ್ನು ವಿಕೃತವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆ

ಕರಾವಳಿ

ಧಾರ್ಮಿಕ ಅವಹೇಳನ ಅಡಿಯಲ್ಲಿ ಬೆಳ್ತಂಗಡಿಯ ವಿಜಯ ಎಂಬಾಕೆಯ ವಿರುದ್ಧ ದೂರು ದಾಖಲು

ಜೈನ ಧರ್ಮೀಯರ ಆರಾದ್ಯ ದೇವರಾದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ತನ್ನ ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಪ್‌ ಮೂಲಕ ಫೋಟೋವನ್ನು ಹರಿಯಬಿಟ್ಟಿದ್ದು ಜೈನ ಧರ್ಮಕ್ಕೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆರೋಪಿಸಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಕಲ್ಮಂಜ ನಿವಾಸಿ ಪಣಿರಾಜ್‌ ಎಂಬವರು ದೂರು ನೀಡಿದ್ದು, ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಜೈನ ಧರ್ಮೀಯರ ಆರಾಧ್ಯ ದೇವರಾದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರಕ್ಕೆ ಮನುಷ್ಯನ ಮುಖವನ್ನು ಸೇರಿಸಿ ಚಡ್ಡಿ ಹಾಕಿ ತನ್ನ ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಫ್‌ ಮೂಲಕ ಫೋಟೋವನ್ನು ಹರಿಯಬಿಟ್ಟಿರುತ್ತಾರೆ. ಇವರು ಹಲವಾರು ಬಾರಿ ಇದೇ ರೀತಿ ಜೈನ ಧರ್ಮ ಹಾಗೂ ಜೈನ ಧರ್ಮಿಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಗೂ ಪೋಸ್ಟ್‌ಗಳನ್ನು ಹಾಕಿ ಅಹಿಂಸಾ ಪ್ರಿಯರಾದ ಜೈನ ಧರ್ಮೀಯರ ಮನಸ್ಸಿಗೆ ಘಾಸಿ ಉಂಟು ಮಾಡಿರುತ್ತಾರೆ.

ಇದರಿಂದ ಜೈನ ಧರ್ಮೀಯರ ಮನಸ್ಸಿಗೆ ನೋವು ಉಂಟಾಗಿರುವುದು ಮಾತ್ರವಲ್ಲ, ಸನಾತನ ವಿಶ್ವ ಧರ್ಮವಾದ ಜೈನ ಧರ್ಮದ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.