ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆದದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
ಖಿಲಾಫತ್ ಚಳವಳಿಗೆ ಮುಂಚೂಣಿ ನಾಯಕತ್ವ ನೀಡಿದ್ದೇ ಉಲಮಾಗಳು.
ಸಮುದಾಯಕ್ಕೆ ನೇತೃತ್ವ ನೀಡುವ ಉಲಮಾಗಳು ಕರೆದರೆ ಇಲ್ಲಿನ ಮುಸ್ಲಿಂ ಸಮುದಾಯ ಯಾವತ್ತಿಗೂ ಅವರ ಬೆನ್ನಿಗೆ ನಿಂತುಕೊಳ್ಳುತ್ತದೆ.
ಏಪ್ರಿಲ್ 18 ರಂದು ಅಡ್ಯಾರ್ ಷಾ ಮೈದಾನದಲ್ಲಿ ಉಲಮಾ ಕೋರ್ಡಿನೇಷನ್ ನೇತೃತ್ವದಲ್ಲಿ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜರುಗಿದ ಬೃಹತ್ ಪ್ರತಿಭಟನಾ ಹೋರಾಟ ಹಲವಾರು ಪಾಠಗಳನ್ನು ಕರಾವಳಿಗೆ ನೀಡಿದ್ದಂತೂ ಸತ್ಯ.
ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆದದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಖಿಲಾಫತ್ ಚಳವಳಿಗೆ ಮುಂಚೂಣಿ ನಾಯಕತ್ವ ನೀಡಿದ್ದೇ ಮುಸ್ಲಿಂ ಉಲಮಾಗಳು. ಭಾರತ ಸ್ವಾತಂತ್ರ್ಯ ನಂತರ ಮುಸ್ಲಿಂ ಉಲಮಾಗಳು ಬೀದಿಗಿಳಿದು ಹೋರಾಟ ಮಾಡಿರುವ ಪ್ರಕರಣ ಬೆರಳೆಣಿಕೆಯದ್ದು. ಕೇಂದ್ರದಲ್ಲಿ ಮೋದಿ ಸರಕಾರ ರಚನೆಯಾದ ನಂತರ ಇಲ್ಲಿನ ಸಂವಿಧಾನಕ್ಕೆ ಕೊಡಲಿ ಪೆಟ್ಟು ನೀಡುವ ಕೆಲಸಗಳು ಆರಂಭವಾದವು. ಸಂವಿಧಾನದ ಮೂಲಭೂತ ಹಕ್ಕುಗಳಾದ ಧಾರ್ಮಿಕ ಸ್ವಾತಂತ್ರ್ಯವನ್ನು ತಿರುಚುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯತೊಡಗಿದವು. ತ್ರಿವಳಿ ತಲಾಕ್, ಮುಸ್ಲಿಂ ಶರೀಅತ್ ಕಾನೂನಿನ ವಿರುದ್ಧ ಫ್ಯಾಸಿಸ್ಟ್ ಶಕ್ತಿಗಳು ಕಣ್ಣು ಹಾಕಿ ಏಕ ಸಿವಿಲ್ ಕೋಡ್ ತರುವ ಪ್ರಯತ್ನಕ್ಕೆ ಕೈ ಹಾಕಿದರು. ಎನ್ ಆರ್ ಸಿ, ಸಿಎಎ ಮೂಲಕ ಅಲ್ಪಸಂಖ್ಯಾತರನ್ನು ಬೆದರಿಸುವ ಕಾರ್ಯತಂತ್ರಕ್ಕೆ ಕೈ ಹಾಕಿದರು. ಎನ್ ಆರ್ ಸಿ, ಸಿಎಎ ಕಾಯ್ದೆ ವಿರುದ್ಧ ನೇರವಾಗಿ ಉಲಮಾಗಳು ಪ್ರತಿಭಟನೆ ಸಂಘಟಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಆದರೆ ಮುಸ್ಲಿಂ ಸಮುದಾಯದ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಗಳಲ್ಲಿ ಭಾಗಿಯಾದರು. ಆದರೆ ಇದೀಗ ನೇರವಾಗಿ ವಕ್ಫ್ ಕಾಯ್ದೆ ತಿದ್ದುಪಡಿ ಮೂಲಕ ಮುಸ್ಲಿಮರ ಮಸೀದಿ, ಜಾಗ, ಖಬರ್ ಸ್ಥಾನಕ್ಕೆ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಕಾನೂನಿನ ಮೂಲಕ ಹಣಿಯಲು ಆರಂಭಿಸಿದಾಗ ದೇಶದಾದ್ಯಂತ ಮುಸ್ಲಿಂ ಧರ್ಮಗುರುಗಳು ಸೆಟೆದು ನಿಂತಿದ್ದಾರೆ. ಮತ್ತೊಂದು ಸ್ವಾತಂತ್ರ್ಯ ಹೋರಾಟದ ರೀತಿಯಲ್ಲಿ ಅಲ್ಲಲ್ಲಿ ಉಲಮಾಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಂಡಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ನೇತೃತ್ವ ನೀಡುವುದು ಉಲಮಾಗಳು. ಉಲಮಾಗಳು ಕರೆದರೆ ಇಲ್ಲಿನ ಮುಸ್ಲಿಂ ಸಮುದಾಯ ಯಾವತ್ತಿಗೂ ಅವರ ಬೆನ್ನಿಗೆ ನಿಂತುಕೊಳ್ಳುತ್ತದೆ ಅನ್ನುವುದಕ್ಕೆ ಉತ್ತಮ ಉದಾಹರಣೆ ಅಡ್ಯಾರ್ ಷಾ ಮೈದಾನದಲ್ಲಿ ಜರುಗಿದ ಲಕ್ಷಾಂತರ ಮುಸ್ಲಿಮರು ಸೇರಿರುವ ಪ್ರತಿಭಟನಾ ಹೋರಾಟವೇ ಸಾಕ್ಷಿ.

ಹೇಳಿ ಕೇಳಿ ಕರಾವಳಿ ಮತೀಯ ಸೂಕ್ಷ್ಮ ಪ್ರದೇಶ. ಇಲ್ಲಿ ಸಾವಿರಾರು ಜನರು ಸೇರಿದರೂ ಏನಾದರೊಂದು ಕಿತಾಪತಿ ನಡೆಯುತ್ತದೆ. ಉಭಯ ಸಮುದಾಯದ ಮಧ್ಯೆ ಕಂದಕಕ್ಕೆ ಕಾರಣವಾಗುತ್ತದೆ. ಆದರೆ ಉಲೆಮಾಗಳು ಸಂಘಟಿಸಿದ ಪ್ರತಿಭಟನಾ ಹೋರಾಟದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನ ಸೇರಿದರೂ ಇಲ್ಲಿನ ಕಾನೂನು ಸುವ್ಯವಸ್ಥೆಗೆ ಕಿಂಚಿತ್ತೂ ಭಂಗ ಉಂಟಾಗಲಿಲ್ಲ. ಪ್ರತಿಭಟನಾ ಸಭೆಗಳಲ್ಲಿ ಪ್ರಚೋದನಕಾರಿ ಭಾಷಣಗಳಿರಲಿಲ್ಲ. ಇನ್ನೊಂದು ಧರ್ಮವನ್ನು ಅವಹೇಳನ ಮಾಡುವ ಘೋಷಣೆಗಳಿರಲಿಲ್ಲ. ಮೈದಾನ ತುಂಬಿ ತುಳುಕಿ ರಾಷ್ಟ್ರೀಯ ಹೆದ್ದಾರಿಯ ಕಿಲೋಮೀಟರ್ ಗಟ್ಟಲೆ ಜನಸಂದಣಿ ಸೇರಿದರೂ ಆಂಬ್ಯುಲೆನ್ಸ್ ನಂತಹ ತುರ್ತು ವಾಹನಗಳ ಪ್ರಯಾಣಕ್ಕೆ ಅಡ್ಡಿಯಾಗಲಿಲ್ಲ. ಇಡೀ ಕರಾವಳಿಯಲ್ಲಿ ಭೀತಿಯ ವಾತಾವರಣಗಳಿಲ್ಲ. ಅರ್ಧ ದಾರಿಯಲ್ಲಿ ಬಾಕಿಯಾದ ಹಿಂದೂ -ಮುಸ್ಲಿಂ-ಕ್ರೈಸ್ತ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸಲು ರಕ್ಷಾಕವಚ ರೀತಿಯಲ್ಲಿ ಕೆಲಸ ಮಾಡಿದ್ದರು ಸ್ವಯಂ ಸೇವಕರು. ಆರ್ಭಟ ಇರಲಿಲ್ಲ, ಎಲ್ಲೆಡೆ ರಾಷ್ಟ್ರ ಧ್ವಜವೇ ಹಾರಾಡುತ್ತಿತ್ತು. ಇನ್ನೊಂದು ಧರ್ಮದ ಪ್ರಾರ್ಥನಾಲಯಕ್ಕೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಪ್ರತಿಭಟನಾ ಸಾಗುವ ರಸ್ತೆ ತುಂಬಾ ನೇಮೋತ್ಸವಕ್ಕೆ ಹಾಕಿದ ಕೇಸರಿ ಬಂಟಿಂಗ್ಸ್ ಪ್ಲೆಕ್ಸ್ ಗಳಿದ್ದರೂ ಒಂದು ಸೂಜಿ ಮೊನೆಯಷ್ಟು ಹಾನಿಯಾಗಿರಲಿಲ್ಲ. ಏಕೆಂದರೆ ಈ ಪ್ರತಿಭಟನಾ ನೇತೃತ್ವ ವಹಿಸಿಕೊಂಡಿದ್ದು ಮುಲ್ಲಾ ಗಳೆಂದು ಕರೆಯಿಸಿಕೊಳ್ಳುವ ಉಲಮಾ ಗಳು ಸಂಘಟಿಸಿದ್ದು.

ಮುಸ್ಲಿಂ ಧರ್ಮಗುರುಗಳು, ಅವರು ನಡೆಸುವ ಮದರಸಗಳ ಬಗ್ಗೆ ಇನ್ನೊಂದು ಸಮುದಾಯದ ಕೆಲವು ಮತೀಯವಾದಿಗಳು ಮುಲ್ಲಾಗಳು, ಭಯೋತ್ಪಾದನೆ ಕೇಂದ್ರಗಳೆಂದು ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕೆಲವು ಮತೀಯವಾದಿಗಳು ಮುಲ್ಲಾಗಳೆಂದು ಕರೆದು ವಿಕೃತ ಆನಂದ ಪಡುವುದು ಇದೆ. ಕರಾವಳಿಯಲ್ಲಿ ಹಲವಾರು ದೊಡ್ಡ ಪ್ರತಿಭಟನೆಗಳು ನಡೆದಿವೆ. ಇನ್ನೊಂದು ಧರ್ಮೀಯರು ಆತಂಕ ಪಡುವಂತಹ ಸನ್ನಿವೇಶಗಳು ಬಹುತೇಕ ಪ್ರತಿಭಟನೆಗಳಲ್ಲಿ ಕಾಣಸಿಕ್ಕಿದೆ. ಘೋಷಣೆಗಳಂತೂ ಇನ್ನೊಂದು ಧರ್ಮದವರನ್ನೇ ಗುರಿಯಾಗಿಟ್ಟುಕೊಂಡವುಗಳೇ ಹೆಚ್ಚು. ಭಾಷಣಗಳು ಇನ್ನೊಂದು ಧರ್ಮೀಯರನ್ನು ಪ್ರಚೋದಿಸುವಂತಹ ಬೆಂಕಿ ಭಾಷಣಗಳು. ಪ್ರತಿಭಟನೆ ಬಿಟ್ಟು ತೆರಳುವಾಗ ದಾರಿ ಮಧ್ಯೆ ಸಿಗುವ ಪ್ರಾರ್ಥನಾಲಯಕ್ಕೆ ಕಲ್ಲು ಬಿಸಾಡಿ ವಿಕೃತಿ ಮೆರೆದಿದ್ದು, ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಎಲ್ಲವೂ ಇತಿಹಾಸ. ಆದರೆ ಮುಲ್ಲಾಗಳೆಂದು ಕರೆಸಿಕೊಳ್ಳುವ ಉಲಮಾಗಳ ನೇತೃತ್ವದಲ್ಲಿ ಬೆಂಕಿ ಭಾಷಣಗಳಿರಲಿಲ್ಲ, ಅನ್ಯಮತೀಯ ಹೆಂಗಳೆಯರು ಪ್ರತಿಭಟನಾ ಸುತ್ತಮುತ್ತ ನಿರ್ಭೀತಿಯಿಂದ ವ್ಯಾಪಾರ ನಡೆಸಲು ಮುಕ್ತ ಅವಕಾಶ ಸಿಕ್ಕಿದ್ದು ಬಹುಶಃ ದೇಶದ ಇತಿಹಾಸದಲ್ಲಿ ಅಡ್ಯಾರ್ ಷಾ ಮೈದಾನ ಪ್ರತಿಭಟನಾ ಹೋರಾಟ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಲಕ್ಷಗಟ್ಟಲೆ ಜನ ಸೇರಿದರೂ ಏನೂ, ಕಾನೂನು ಕೈಗೆತ್ತಿಕೊಳ್ಳದೆ ಅತ್ಯಂತ ಶಾಂತಿಯುತವಾಗಿ ಪ್ರತಿಭಟನಾ ಹೋರಾಟ ನಡೆಸಬಹುದು ಅನ್ನುವುದನ್ನು ಉಲಮಾಗಳು ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಬಸ್ಸಿಗೆ ಕಲ್ಲು ಹೊಡೆದು ಹಿಂಸಾತ್ಮಕವಾಗಿ, ಇನ್ನೊಂದು ಧರ್ಮೀಯರನ್ನು ಪ್ರಚೋದಿಸುವುದೇ ಪ್ರತಿಭಟನೆ ಅಂದುಕೊಳ್ಳುವವರಿಗೆ ಅವರ ಭಾಷೆಯಲ್ಲಿ ಹೇಳುವ ಮುಲ್ಲಾಗಳೇ ಪ್ರತಿಭಟನೆ ಹೀಗೂ ಮಾಡಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.