ರಾಜ್ಯದಲ್ಲಿ ವಿದ್ಯುತ್ ಬಳಕೆಯನ್ನು ರಿಯಲ್-ಟೈಂನಲ್ಲಿ ಟ್ರ್ಯಾಕ್ ಮಾಡಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸ್ಮಾರ್ಟ್ ಪ್ರೀ-ಪೇಯ್ಡ್ ಮೀಟರ್ಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದೆ. ಆದರೆ, ಈ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದ್ದು, ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಸ್ಮಾರ್ಟ್ ಮೀಟರ್ಗಳ ಅಳವಡಿಕೆಗೆ ವಿಧಿಸಲಾಗಿರುವ ಭಾರಿ ಶುಲ್ಕದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದೆ.
ಬೆಸ್ಕಾಂನ ಸ್ಮಾರ್ಟ್ ಮೀಟರ್ ಕಡ್ಡಾಯ ನಿಯಮವನ್ನು ಪ್ರಶ್ನಿಸಿ ಜಯಲಕ್ಷ್ಮೀ ಎಂಬುವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಹೈಕೋರ್ಟ್ ಪೀಠವು ನಡೆಸಿತು. ವಿಚಾರಣೆಯ ವೇಳೆ, ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
‘ಪಕ್ಕದ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ಗೆ ಕೇವಲ 900 ರೂಪಾಯಿ ಶುಲ್ಕವಿದೆ, ಆದರೆ ಕರ್ನಾಟಕದಲ್ಲಿ 10,000 ರೂಪಾಯಿಗಳು ಏಕೆ.?’ ಎಂದು ಪ್ರಶ್ನಿಸಿತು. ಜೊತೆಗೆ, ‘ಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿಯನ್ನು ಏಕೆ ರೂಪಿಸಿದ್ದೀರಿ? ಬಡವರಿಂದ ಇಷ್ಟು ದೊಡ್ಡ ಮೊತ್ತವನ್ನು ಕಿತ್ತುಕೊಂಡರೆ ಅವರು ಎಲ್ಲಿಗೆ ಹೋಗಬೇಕು?’ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ‘ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್ಗಳು ಮತ್ತು ಹೊಸ ಸಂಪರ್ಕಗಳಿಗೆ ಪೋಸ್ಟ್-ಪೇಯ್ಡ್ ಸ್ಮಾರ್ಟ್ ಮೀಟರ್ಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮವು ಕೇವಲ ಹೊಸ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ,’ ಎಂದು ಅವರು ತಿಳಿಸಿದರು. ಅರ್ಜಿದಾರ ಜಯಲಕ್ಷ್ಮೀ ಪರ ವಕೀಲೆ ಲಕ್ಷ್ಮೀ ಐಯ್ಯಂಗಾರ್, ‘3-ಫೇಸ್ ಸ್ಮಾರ್ಟ್ ಮೀಟರ್ಗೆ 10,000 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.
ಈ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸ್ಮಾರ್ಟ್ ಮೀಟರ್ ಶುಲ್ಕದ ವಿಷಯದಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರವನ್ನು ಕೋರಿದರು. ‘ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಗ್ರಾಹಕರಿಗೆ ದರ ಏರಿಕೆಯ ಹೊಡೆತ ಬೀಳಬಾರದು,’ ಎಂದು ತಿಳಿಸಿ, ಈ ಬಗ್ಗೆ ಜುಲೈ 9, 2025ರಂದು ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು. ಈ ಹಿಂದೆಯೂ ಕೋರ್ಟ್ ಸ್ಮಾರ್ಟ್ ಮೀಟರ್ ಶುಲ್ಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು, ಇದೀಗ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.
ಸ್ಮಾರ್ಟ್ ಮೀಟರ್ಗಳು ವಿದ್ಯುತ್ ಬಳಕೆಯನ್ನು ನಿಖರವಾಗಿ ದಾಖಲಿಸುವ ಮತ್ತು ರಿಯಲ್-ಟೈಂ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿವೆ. ಆದರೆ, ಈ ಯೋಜನೆಯ ಜಾರಿಗೊಂಡಿರುವ ರೀತಿಯ ಬಗ್ಗೆ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ವಿಶೇಷವಾಗಿ,10,000 ರೂಪಾಯಿಗಳ ಆರಂಭಿಕ ಶುಲ್ಕ ಮತ್ತು ತಿಂಗಳಿಗೆ 75 ರೂಪಾಯಿಗಳ ಹೆಚ್ಚುವರಿ ಶುಲ್ಕವು ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ‘ಎಲ್ಲರೂ ಸ್ಮಾರ್ಟ್ ಮೀಟರ್ ಅಳವಡಿಸಬೇಕೆಂದರೆ, ಬಡವರು ಏನು ಮಾಡಬೇಕು?’ ಎಂದು ಕೋರ್ಟ್ ಪ್ರಶ್ನಿಸಿರುವುದು ಈ ವಿಷಯದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
