ಕೈಕಂಬ: ಹತ್ತು ವರ್ಷಗಳ ನರೇಂದ್ರ ಮೋದಿ ಆಡಳಿತದಲ್ಲಿ ಕಾರ್ಮಿಕ ಹಕ್ಕುಗಳನ್ನು ಬಹುತೇಕ ಕಿತ್ತುಕೊಳ್ಳಲಾಗಿದೆ. ಈಗಾಗಲೆ ಕಾರ್ಮಿಕರು, ನೌಕರರ ಹೋರಾಟದ ಶಕ್ತಿ ಕ್ಷೀಣಿಸಿ ದುರ್ಬಲಗೊಂಡಿದೆ. ಬಿಜೆಪಿ ಗೆದ್ದು ಮೋದಿ ಸರಕಾರ ಅಧಿಕಾರದಲ್ಲಿ ಮುಂದುವರಿದರೆ ದುಡಿಯುವ ವರ್ಗದ ಹಕ್ಕುಗಳು ಪೂರ್ತಿ ನಾಶವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರಕಾರದ ಸೋಲಿಗೆ ಹಗಲು ರಾತ್ರಿ ಕೆಲಸ ಮಾಡದೆ ಕಾರ್ಮಿಕ ವರ್ಗಕ್ಕೆ ಬೇರೆ ದಾರಿ ಇಲ್ಲ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಕೈಕಂಬದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುಪುರ ವಲಯ ಮಟ್ಟದ ಸಿಪಿಐಎಂ ಕಾರ್ಯಕರ್ತರ ಹಾಗೂ ಹಿತೈಷಿಗಳ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರಿಸುತ್ತಾ ಅವರು, ಬಹುಸಂಖ್ಯಾತರನ್ನು ಧರ್ಮದ ಉನ್ಮಾದದಲ್ಲಿ ತೇಲಿಸುತ್ತಾ ಹಿಂದು ಧರ್ಮದ ಉದ್ದಾರದ ಫೋಸು ಕೊಡುವ ನರೇಂದ್ರ ಮೋದಿ ವಾಸ್ತವದಲ್ಲಿ ಬಹುಸಂಖ್ಯಾತ ಜನರ ವಿರೋಧಿಯೇ ಆಗಿದ್ದಾರೆ. ಧರ್ಮಾಧಾರಿತ ದೇಶ ಸ್ಥಾಪಿಸುವ ಮರೆಯಲ್ಲಿ ಬಹುಸಂಖ್ಯಾತ ಜನ ವಿಭಾಗವಾದ ರೈತರು, ಕಾರ್ಮಿಕರು, ಕೂಲಿಕಾರರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಅವರನ್ನು ಶೋಷಿಸಿ ಅದಾನಿ, ಅಂಬಾನಿಗಳು ಮತ್ತಷ್ಟು ಶ್ರೀಮಂತರಾಗುವಂತೆ ನೋಡಿಕೊಳ್ಳುತ್ತಾರೆ. ಇವರ ಧರ್ಮ ರಕ್ಷಣೆಯ ಘೋಷಣೆ ಬರೀ ಬೊಗಳೆ ಮಾತ್ರ ಅಲ್ಲ, ಬಹುಸಂಖ್ಯಾತ ಜನರನ್ನು ಬಡತನಕ್ಕೆ ದೂಡುವ ಅಜೆಂಡಾ ಎಂದು ಆರೋಪಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ CPIM ಹಿರಿಯ ನಾಯಕರಾದ ಬಾಬು ಸಾಲ್ಯಾನ್ ತಿರುವೈಲು ಮಾತಾಡುತ್ತಾ, ಬಿಜೆಪಿ ಕಾರ್ಯಕರ್ತರು ಪಿಸುಮಾತಿನ ಪ್ರಚಾರದ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದು ಅದೇ ಯೋಜನೆಯ ವಿರುದ್ದ ಅಪಪ್ರಚಾರ ಮಾಡುತ್ತಾರೆ. ಕೇಂದ್ರ ಸರಕಾರದಿಂದ ಸಿಗುವ ಅಲ್ಪ ಸ್ವಲ್ಪ ಯೋಜನೆಗಳನ್ನು ಮೋದಿಯ ಕೊಡುಗೆ ಎಂದು ಪ್ರಚಾರ ಮಾಡುವ ಇವರು, ಗ್ಯಾರಂಟಿ ಯೋಜನೆಗೆ ಸಿದ್ದರಾಮಯ್ಯ ಮನೆಯಿಂದ ದುಡ್ಡು ತರುವುದಿಲ್ಲ, ಅದು ನಮ್ಮದೇ (ಸರಕಾರದ)ದುಡ್ಡು ಎಂದು ಜನರನ್ನು ದಿಕ್ಕು ತಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಎಡಪಕ್ಷಗಳ ಕಾರ್ಯಕರ್ತರು ಬಹಳ ಎಚ್ಚರದಿಂದ ಜನರ ಮಧ್ಯೆ ಸತ್ಯ ತಿಳಿಸುವ ಕೆಲಸ ಮಾಡಬೇಕು, ಚುನಾವಣೆಯ ವರೆಗೆ ವಿಶ್ರಾಂತಿ ಪಡೆಯಬಾರದು ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಸೋಲಿಸಲು ವ್ಯಾಪಕವಾಗಿ ಗುರುಪುರ ವಲಯ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ನಿರ್ಣಯಿಸಲಾಯಿತು. ಪ್ರಾರಂಭದಲ್ಲಿ ನೋಣಯ್ಯ ಗೌಡ ಸ್ವಾಗತಿಸಿದರೆ,ಕೊನೆಯಲ್ಲಿ ವಸಂತಿ ಕುಪ್ಪೆಪದವು ವಂದಿಸಿದರು.
