ಆರೋಗ್ಯಾಧಿಕಾರಿ ಡಾ. ಎಸ್.ಕೆ.ಸವಿತಾ ಅವರು ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವುದು ವರದಿಯಲ್ಲಿ ಬಯಲಾಗಿದೆ. ಸವಿತಾ ಅವರು ಕೊವಿಡ್ ಸಾಂಕ್ರಮಿಕ ರೋಗ ಸಂದರ್ಭದಲ್ಲಿ ಸ್ವಾಬ್ ಕಲೆಕ್ಟರ್ ಮತ್ತು ಗಣಕ ಯಂತ್ರ ನಿರ್ವಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ತಮ್ಮ ಕುಟುಂಬದವರ ಖಾತೆಗೆ ಹಣ ವರ್ಗಾಯಿಸಿ ಬಿಬಿಎಂಪಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್ ರಮೇಶ್ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ದಿ ಸಂಘದ ಅಧ್ಯಕ್ಷ ಎ.ಅಮತ್ ರಾಜ್ ಅವರು ಬಿಬಿಎಂಪಿ ಮುಖ್ಯ ಅಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಆನ್ವಯ ತನಿಖೆಗೆ ಆದೇಶಿಸಲಾಗಿತ್ತು. ಇದೀಗ ಇದರ ಸಂಪೂರ್ಣ ವರದಿಯು ಮುಖ್ಯ ಅಯುಕ್ತರ ಕೈ ಸೇರಿದ್ದು, ಮುಂದಿನ ಕ್ರಮಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ ನಗರಾಭಿವದ್ದಿ ಇಲಾಖೆಗೆ ಕಡತ ರವಾನೆ ಮಾಡಲಾಗಿದೆ.
ಸವಿತಾ ಅವರಿಗೆ ಎನ್ಪಿಸಿಸಿಎಚ್ಎಚ್ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಶಾಂತಿನಗರ ವಿಭಾಗದ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟ ಸ್ವಾಬ್ ಕಲೆಕ್ಟರ್ ಮತ್ತು ಗಣಕಯಂತ್ರ ನಿರ್ವಾಹಕರುಗಳ ಹೆಸರಿನಲ್ಲಿ ಅವ್ಯವಹಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಬಿ.ಬಿ.ಎಂ.ಪಿ ನೌಕರರು ಮತ್ತು ಅವರ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರ ಖಾತೆಗೆ ಹಣ ವರ್ಗಾಯಿಸಿ, ಕೆಎಫ್ಸಿ ಕಾಯ್ದೆ 14, 15 ಮತ್ತು 16 ಉಲ್ಲಂಘನೆ ಮಾಡಿ ಪಾಲಿಕೆಯನ್ನು ಹಾಗೂ ಕ್ಯಾನ್ಸರ್ ಕೇರ್ ಇಂಡಿಯಾ ಟ್ರಸ್ಟ್ ಸಿಬ್ಬಂದಿಗಳನ್ನು ವಂಚಿಸಿ 2020ರ ಸರ್ಕಾರಿ ನೌಕರರ ನಿಯಮಾವಳಿ ನಿಯಮ ಉಲ್ಲಂಘಿಸಿ, ಗಂಭೀರ ಕರ್ತವ್ಯಲೋಪ ಎಸಗಿರುವ ಮೇರೆಗೆ ಇವರ ವಿರುದ್ಧ 1957ರ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನುಬಂಧಗಳಿಗನುಗುಣವಾಗಿ ವಿಚಾರಣೆಯನ್ನು ನಡೆಸಲು ಪ್ರಸ್ತಾಪಿಸಲಾಗಿತ್ತು.
ಕರ್ತವ್ಯಲೋಪಕ್ಕೆ ಸಂಬಂಧಿಸಿದ ನಿರ್ದಿಷ್ಟವಾದ ಆರೋಪ ಪಟ್ಟಿ ಮತ್ತು ಆರೋಪ ವಿಷಯವನ್ನು ಸಮರ್ಥಿಸುವ ದಾಖಲೆಗಳ ಮತ್ತು ಸಾಕ್ಷಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿರುವುದರಿಂದ ಅವರ ವಿರುದ್ಧ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ.
