ಹೆಬ್ಬಗೋಡಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ.
ಪ್ರಕರಣದ ಆರೋಪಿ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳು ಆಯೋಗಕ್ಕೆ ದೂರು ನೀಡಿದ್ದರು.ದೂರು ಆಧರಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಆಯೋಗವು ಸೂಚನೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿಚಾರಣೆ ನಡೆಸಿ ನವಂಬರ್ 21ರ ಒಳಗೆ ವರದಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿದೆ. ಹೆಬ್ಬಗೋಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಯನ್ನು ಸಿಸಿಬಿ ಅಧಿಕಾರಿಗಳು ಸಲ್ಲಿಸಿದ್ದರು. ತನಿಖೆ ವೇಳೆ ಪ್ರತಿ ಆರೋಪಿಯಿಂದ ರೂಪಾಯಿ 10 ಲಕ್ಷ ಪಡೆಯಲಾಗಿದೆ. ಸುಳ್ಳು ವೈದ್ಯಕೀಯ ಸಾಕ್ಷ್ಯ ಸೃಷ್ಟಿಸಿ ಸಹಿ ಹಾಕುವಂತೆ ಸಿಸಿಬಿ ಪೊಲೀಸರು ಒತ್ತಡ ಹೇರಿದ್ದರು. ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದಿದ್ದರು ಎಂದು ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು.
