ಹಾವು ಖರೀದಿಸಲು ಮಾರುವೇಷದಲ್ಲಿ ಬಂದ ಅರಣ್ಯಾಧಿಕಾರಿಗಳು; ತಗುಲಾಕಿಕೊಂಡ ಆರೋಪಿಗಳು.!

ಕರಾವಳಿ

ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಹೆಬ್ಬಾವು ಮಾರಾಟಕ್ಕೆ ಯತ್ನ; ವಿದ್ಯಾರ್ಥಿ ಸೇರಿ ನಾಲ್ವರು ಅಂದರ್

ಮಂಗಳೂರು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹೆಬ್ಬಾವು ಮಾರಾಟ ಮಾಡುವ ತಂಡವನ್ನು ಖೆಡ್ಡಾಕ್ಕೆ ಬೀಳಿಸಿ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿದೆ.

ವಿಹಾಲ್ ಶೆಟ್ಟಿ(18), ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬ್ಬಂದಿ ಮಹಮ್ಮದ್ ಮುಸ್ತಫಾ (22) ಹಾಗೂ 16 ವರ್ಷದ‌ ಪ್ರಥಮ‌ ಪಿಯುಸಿ ವಿದ್ಯಾರ್ಥಿ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ಸಾಕುಪ್ರಾಣಿ ಮಾರಾಟ ಅಂಗಡಿ ಹೊಂದಿದ್ದು, ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಹಾವು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಹಾವು ಖರೀದಿಸಲು ವಿಹಾಲ್ ಶೆಟ್ಟಿಯನ್ನು ಸಂಪರ್ಕಿಸಿದ್ದರು. ತನ್ನನ್ನು ಸಂಪರ್ಕಿಸಿದವರು ನೈಜ ಗ್ರಾಹಕರೆಂದು ತಿಳಿದು ಹೆಬ್ಬಾವು ಮಾರಾಟಕ್ಕೆ ಮುಂದಾಗಿದ್ದ. ಅಲರ್ಟ್ ಆದ ಅರಣ್ಯಾಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಸೂಚಿತ (ಶೆಡ್ಯೂಲ್ 1) ಭಾಗ ಸಿ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್(ಹೆಬ್ಬಾವು) ಅನ್ನು ಆರೋಪಿಗಳು ಹೊರದೇಶದ ಅಂದರೆ ಬರ್ಮಿಸ್ ಬಾಲ್ ಪೈಥಾನ್ ಎಂದು ಮಾರಾಟ ಮಾಡುತ್ತಿದ್ದರು‌. ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ‌ ದಾಖಲಿಸಲಾಗಿದೆ.