ಜೆಡಿಎಸ್ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ; ಅವರು ಕೈಜೋಡಿಸಿಲಿ, ಬಿಡಲಿ, ಅವರ ಬೆಂಬಲ ನಿರೀಕ್ಷಿಸದೆ ಪಾದಯಾತ್ರೆ ಆಯೋಜಿಸಿ: ಅಮಿತ್ ಶಾ ಖಡಕ್ ವಾರ್ನಿಂಗ್

ರಾಜ್ಯ

ಜೆಡಿಎಸ್ ನಾಯಕರ ಯಾವುದೇ ಬ್ಲಾಕ್ಮೇಲ್ ತಂತ್ರಕ್ಕೆ ಬಗ್ಗದೇ ನಿಗದಿಯಾಗಿರುವಂತೆ ಬೆಂಗಳೂರಿನಿಂದ ಮೈಸೂರುವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಮುಂದುವರೆಸಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯಘಟಕಕ್ಕೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ತಲೆಕೆಡಿಸಿಕೊಳ್ಳದೆ. ಈಗಾಗಲೇ ತೀರ್ಮಾನಿಸಿರುವಂತೆ ಆ.3ರಿಂದ ಮೈಸೂರುವರೆಗೆ ಪಾದಯಾತ್ರೆಯನ್ನು ನಡೆಸಿ ಸರ್ಕಾರದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡುವಂತೆ ಸೂಚನೆ ಕೊಡಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದ್ದಾರೆ.

ಜೆಡಿಎಸ್ ನಾಯಕರು ಪಾದಯಾತ್ರೆಗೆ ಏಕೆ ವಿರೋಧಪಡಿಸುತ್ತಾರೆ ಎಂಬುದು ನಮಗೆ ಗೊತ್ತಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅವರು ಕೈಜೋಡಿಸಿದರೆ ಜೋಡಿಸಲಿ, ಇಲ್ಲದಿದ್ದರೆ ಬಿಡಲಿ, ಅವರ ನೈತಿಕ ಬೆಂಬಲವನ್ನೂ ನಿರೀಕ್ಷಿಸದೇ ಬಿಜೆಪಿ ವತಿಯಿಂದಲೇ ಪಾದಯಾತ್ರೆಯನ್ನು ಆಯೋಜಿಸಬೇಕೆಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಒಂದು ಬಾರಿ ನಾವು ಜೆಡಿಎಸ್ ಒತ್ತಡಕ್ಕೆ ಮಣಿದು ಬಗ್ಗಿದರೆ ಭವಿಷ್ಯದಲ್ಲಿ ಮತ್ತೆ ಇದೇ ತಂತ್ರವನ್ನು ಅನುಸರಿಸುತ್ತಾರೆ. ಪಾದಯಾತ್ರೆ ಯಶಸ್ವಿಯಾದರೆ ಅದು ನೇರವಾಗಿ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂಬ ಆತಂಕ ಜೆಡಿಎಸ್ ನಾಯಕರಿಗಿದೆ.

ಮುಡಾ ಮತ್ತು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವು ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಹಾನಿಯುಂಟು ಮಾಡಿದೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳಬೇಕು. ಸಿದ್ದರಾಮಯ್ಯ ಸರ್ಕಾರದ ಒಂದೊಂದು ಹಗರಣಗಳನ್ನು ಜನತೆಯ ಮುಂದೆ ಇಡಿ ಎಂದು ಅಮಿತ್ ಶಾ ಸೂಚಿಸಿರುವುದಾಗಿ ತಿಳಿದುಬಂದಿದೆ. ಪಕ್ಷದ ವರಿಷ್ಠರಿಂದ ಸೂಚನೆ ಸಿಕ್ಕ ಬೆನ್ನಲ್ಲೇ ವಿಜಯೇಂದ್ರ ಪಾದಯಾತ್ರೆ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.