ಭೂಸ್ವಾಧೀನ ಮಾಡಿಕೊಳ್ಳದೇ, ಪರಿಹಾರ ನೀಡದೆ ಖಾಸಗಿ ಜಮೀನಿನಲ್ಲಿ ರಸ್ತೆ
ಬೆಳಗಾವಿ ನಗರದಲ್ಲಿ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ರಸ್ತೆ ನಿರ್ಮಿಸಿರುವುದು ಹಲವು ವಿವಾದಕ್ಕೆ ಕಾರಣವಾಗಿತ್ತು. ಪಾಲಿಕೆಗೆ ಹೈ ಕೋರ್ಟ್ ಚಾಟಿ ಬೀಸಿದ ಬಳಿಕ ಜಾಗವನ್ನು ಮತ್ತೆ ಭೂ ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ.
ಈ ಮೊದಲು ಜಾಗದ ವಿವಾದದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವಾಗ ನ್ಯಾಯಾಲಯ ಪರಿಹಾರ ಕೊಡಲು 20 ಕೋಟಿ ರೂ ಗಳನ್ನು ಉಪ ವಿಭಾಗಾಧಿಕಾರಿಗಳ ಬಳಿ ಡಿಪಾಜಿಟ್ ಮಾಡುವಂತೆ ನಿರ್ದೇಶನ ನೀಡಿತ್ತು. ಈ ವಿಚಾರವಾಗಿ ಬೆಳಗಾವಿ ಪಾಲಿಕೆ ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆಯ ವಿಶೇಷ ಸಭೆ ನಡೆಸಿ ನ್ಯಾಯಾಲಯದ ನಿರ್ದೇಶನ ಪಾಲಿಸಿತ್ತು.
ಆದರೆ ವಿಚಾರಣೆ ಮುಂದುವರೆದಾಗ ನೀವು ಜಾಗ ವಾಪಸ್ ಕೊಡ್ತೀರಾ ಇಲ್ಲ ಪರಿಹಾರ ಕೊಡ್ತೀರಾ.. ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ ಸಂಧರ್ಭದಲ್ಲಿ ಜಾಗದ ಮಾಲೀಕರ ನ್ಯಾಯವಾದಿ ಹಾಗು ಪಾಲಿಕೆ ಅಧಿಕಾರಿಗಳು ಇಬ್ಬರೂ ಪರಸ್ಪರ ಜಾಗ ವಾಪಸ್ ಕೊಡುವ ವಿಚಾರಕ್ಕೆ ಸಮ್ಮತಿ ನೀಡಿದ ಕಾರಣ ಕೋರ್ಟ್ ನಿರ್ದೇಶನದಂತೆ ಇವತ್ತು ಜಾಗವನ್ನು ವಾಪಸ್ ಕೊಟ್ಟಿದ್ದಾರೆ.

ಭೂಸ್ವಾಧೀನ ಮಾಡಿಕೊಳ್ಳದೇ ಪರಿಹಾರ ಕೊಡದೇ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ, ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಭೂ ಮಾಲೀಕರಿಗೆ ಸೋಮವಾರದ ಒಳಗೆ ಜಾಗ ಹಸ್ತಾಂತರ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೂ ಮಾಲಕರಿಗೆ ಜಾಗವನ್ನು ಹಸ್ತಾಂತರ ಮಾಡಿದ್ದಾರೆ.
