ಮಣ್ಣಗುಡ್ಡೆ ಕ್ವಾಟ್ರಸ್ ನಲ್ಲಿ ನಡೆಯುತ್ತಿರುವುದೇನು..?
ಲಂಚ.. ಲಂಚ..ಲಂಚ ಮಂಗಳೂರು ಮಹಾನಗರ ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯ ಇದೊಂದೆ. ಇಲ್ಲಿ ಲಂಚ ಮುಟ್ಟದವನು ಪಾಪಿ ಅನ್ನುವಂತೆ ಭ್ರಷ್ಟಾಚಾರದ ಪರಮಾವಧಿ ಮೇಳೈಸಿದೆ. ಇಡೀ ಮಂಗಳೂರು ನಗರದ ಶಕ್ತಿ ಕೇಂದ್ರವಾದ ಮನಪಾದಲ್ಲಿ ಊಟದ ಸ್ಪೀಡಂತೂ ಬಲು ಜೋರು.
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಇಲ್ಲಿದ್ದು ಎತ್ತಂಗಡಿಯಾದ ಅನೇಕರು ಮತ್ತೆ ಮತ್ತೆ ಇಲ್ಲಿಯೆ ಬೀಡು ಬಿಟ್ಟಿರುತ್ತಾರೆ. ಕಂದಾಯ ಸೆಕ್ಷನ್ ಬಿಟ್ಟು ಹೋಗಲು ಇಲ್ಲಿನ ಯಾವುದೇ ಅಧಿಕಾರಿಗಳಿಗೂ ಮನಸ್ಸು ಒಪ್ಪುತ್ತಿಲ್ಲ. ವರ್ಗಾವಣೆಯಾದರೂ ರಾಜಕಾರಣಿಗಳೊಂದಿಗೆ ವಸೂಲಿ ಬಾಜಿ ನಡೆಸಿ ಇಲ್ಲಿಯೆ ಪರ್ಮನೆಂಟಾಗಿ ಗೂಟ ಹಾಕುತ್ತಾರೆ. ಇಂಜಿನಿಯರಿಂಗ್ ವಿಭಾಗದ ಕಥೆ ಹೇಳಿ ಪ್ರಯೋಜನ ಇಲ್ಲ. ಇಲ್ಲಿ ಗುತ್ತಿಗೆದಾರರೊಂದಿಗೆ ನೇರ ಸೆಟ್ಲ್ ಮೆಂಟ್ ನಡೆಯುತ್ತಿದೆ. ಒಂದೊಂದು ಕಾಮಗಾರಿಗಳಲ್ಲಿ ಇಂತಿಷ್ಟು ರೇಟು ಫಿಕ್ಸ್. ಲಂಚ ಮುಟ್ಟದೆ ಇಂಜಿನಿಯರಿಂಗ್ ಸೆಕ್ಷನ್ ನಲ್ಲಿ ಕೆಲಸವೇ ನಡೆಯಲ್ಲ. ಟಿಪಿಓ ಸೆಕ್ಷನ್ ನದ್ದು ಬೃಹತ್ ಗೋಲ್ಮಾಲ್. ಆರೋಗ್ಯ ಇಲಾಖೆಯಂತೂ ಜೀವ ಸೆಲೆ ಕಳೆದುಕೊಂಡು ಬಿಟ್ಟಿದೆ. ಸ್ಮಾರ್ಟ್ ಸಿಟಿಯಂತೂ ಗುಂಡಿ ಅಗೆದು ಜೇಬು ತುಂಬಿಸಿಕೊಳ್ಳುವ ಕರಫ್ಟ್ ಇಲಾಖೆಯಾಗಿ ಮಾರ್ಪಟ್ಟಿದೆ. ಇನ್ನು ವಿದ್ಯುತ್ ವಿಭಾಗ, ನೀರಿನ ವಿಭಾಗ, ಇತರ ವಿಭಾಗಗಳೆಲ್ಲ ಸೇವೆ ಮಾಡುವ ಬದಲು ಕಾಸು ಮಾಡುವ ದಂಧೆಯಾಗಿ ಬದಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಷ್ಟೆಲ್ಲಾ ಲಂಚಾವತಾರ ಅನಾಚಾರ ನಡೆಯುತ್ತಿದ್ದರೂ ಇದಕ್ಕೆಲ್ಲ ಬ್ರೇಕ್ ಹಾಕಬೇಕಾದ ಆಯುಕ್ತರು ಕೋಟಿ ಕೋಟಿ ಡೀಲ್ ನಲ್ಲಿ ಮಗ್ನರಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಅನ್ನುವಂತೆ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಇಲ್ಲೀಗಲ್ ವ್ಯವಹಾರಗಳಿಗೆ ಆಯುಕ್ತರೇ ಬಾಸ್.
ಮಹಾನಗರ ಪಾಲಿಕೆಯಲ್ಲಿ ಕಳೆದ 10, 20 ವರ್ಷಗಳಿಂದ ಮೂಲೆ ಸೇರಿದ್ದ ಅಕ್ರಮ ಕಟ್ಟಡದ ಫೈಲ್ ಗಳು ‘ಆನಂದ’ ಕೃಪೆಯಿಂದ ಸಕ್ರಮಗೊಳ್ಳುತ್ತಿದೆಯಂತೆ. ಕೋಟಿ ಕೋಟಿ ಡೀಲ್ ಗೆ ಫೈಲ್ ಗಳು ವಿಲೇವಾರಿ ಆಗುತ್ತಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ನಗರದ ಕೆಲವೊಂದು ಪ್ರದೇಶಗಳಲ್ಲಿ ಸಮತಟ್ಟಿನ ಜಾಗಗಳಿರುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಕಟ್ಟಡ ಕಟ್ಟುವಾಗ ಕೆಲವೊಂದು ಬಿಲ್ಡಿಂಗ್ ಬೈಲಾಗಳನ್ನು ಪಾಲಿಸಲಾಗಲ್ಲ. ಮತ್ತೊಂದೆಡೆ ಬಿಲ್ಡರ್ ಗಳು ಮತ್ತು ಕಾಂಟ್ರಾಕ್ಟರುಗಳು ಒಂದೆರಡು ಮಹಡಿಗಳ ಜಾಸ್ತಿ ಕಟ್ಟಿಕೊಂಡು ಬಿಟ್ಟಿರುತ್ತಾರೆ. ಇಂತಹ ಕಟ್ಟಡಗಳನ್ನೆಲ್ಲ ಸಕ್ರಮ ಮಾಡಿಕೊಳ್ಳಲು ಹತ್ತು ಹದಿನೈದು ವರ್ಷಗಳಿಂದಲೂ ಕಾಯುತ್ತಿದ್ದರು. ಸರಕಾರಗಳು ಎರಡೆರಡು ಬಾರಿ ಅಕ್ರಮ -ಸಕ್ರಮ ಕಾನೂನು ಜಾರಿಗೊಳಿಸಲು ಪ್ರಯತ್ನಿಸಿದರಾದರೂ ಅದು ನೆನೆಗುದಿಗೆ ಬಿದ್ದಿದೆ.
ಇದೀಗ ಅಂತಹ ಕಟ್ಟಡಗಳ ಫೈಲ್ ಗಳು ಮನಪಾ ಆಯುಕ್ತರ ಕೃಪಾಕಟಾಕ್ಷದಿಂದ ಸಕ್ರಮಗೊಳ್ಳುತ್ತಿದೆಯಂತೆ. ಕೆಲವೊಂದು ದಾಖಲೆಗಳು ಇಲ್ಲಿಯೇ ರೆಡಿಯಾಗುತ್ತಿದೆಯಂತೆ. ಪ್ರತಿಯೊಂದು ಫೈಲಿಗೂ 50 ಲಕ್ಷದಿಂದ 1 ಕೋಟಿಯವರೆಗೂ ಡಿಮ್ಯಾಂಡ್ ಮಾಡಲಾಗುತ್ತಿದೆಯಂತೆ. ಹೀಗೆ ಕನಿಷ್ಠ 25 ಫೈಲ್ ಗಳು ಪಾಸಾಗಿದೆ ಅನ್ನುವ ಗುಸು ಗುಸು ಇದೆ.
ಮಹಾನಗರ ಪಾಲಿಕೆ ಆಯುಕ್ತರಿಗೆ ಈ ವಿಚಾರದ ಡೀಲ್ ಕುದುರಿಸಲೆಂದೇ ಒಂದು ಬ್ರೋಕರ್ ಗಳ ತಂಡವೇ ಇದೆ. ವ್ಯವಹಾರ ಕುದುರಿಸುವುದು.. ಡೀಲ್ ನಲ್ಲಿಯ ಚರ್ಚೆ, ಎಲ್ಲಾ ಇಲ್ಲೇ ಆಗೋದು. ಆದರೆ ಅದು ಲೀಕಾಗಿ ಲೋಕಾಯುಕ್ತರಿಂದ ರೈಡ್ ಕೂಡಾ ಆಗಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ. ಮಂಡ್ಯದಲ್ಲಿದ್ದಾಗ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಹದಿನೈದು ವರ್ಷ ಇಂಡಿಯನ್ ಆರ್ಮಿಯಲ್ಲಿ ಸೇವೆಗೈದವರು. ಮಂಗಳೂರಿಗೆ ಬಂದ ಕೆಲ ತಿಂಗಳುಗಳಲ್ಲಿ ಖಡಕ್ಕ್ ಆಗಿದ್ದರು. ಮಂಗಳೂರಿನ ಬೆಂದೂರ್ ವೆಲ್ ಬಳಿಯ ಪ್ರತಿಷ್ಠಿತ ಆಪಾರ್ಟ್ ಮೆಂಟ್ ಕುಸಿದಾಗ ಬಿಲ್ಡರ್ ಗಳಿಗೆ ಶೋಕಾಸ್ ನೋಟಿಸ್ ಕೊಟ್ಟು ಸುದ್ದಿಯಾಗಿದ್ದರು. ಇದು ಕೆಲವು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮರುದಿನವೇ ಎತ್ತಂಗಡಿಯ ಆರ್ಡರ್ ಬಂದಿತ್ತು. ಆದರೆ ಆಯುಕ್ತರು ಬಲು ಚಾಲಾಕಿ. ಬೆಂಗಳೂರು ಮಟ್ಟದಲ್ಲೇ ಲಾಬಿ ನಡೆಸಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ನೆಲಮಹಡಿಯಲ್ಲಿ ಟ್ಯಾಕ್ಸ್ ಚಲನ್ ಮಾಡಿ ಕೊಡುವ ಮಹಿಳೆಯರಲ್ಲಿ ಒಬ್ಬರು ಖಾತೆ ಮಾಡಿಕೊಡುತ್ತೇವೆ ಎಂದು ಬರೀ 5000 ರೂಪಾಯಿ ಪಡೆದಿದ್ದಕ್ಕೆ ಅವರನ್ನು ಮನಪಾದಿಂದಲೇ ಎತ್ತಂಗಡಿ ಮಾಡಿದ್ದರು. ಆದರೆ ಅಡಿಕೆ ಕದ್ದವರ ಮೇಲೆ ಕ್ರಮ ಅನ್ನುವಂತೆ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಾಗೆ ಬಿಟ್ಟಿದ್ದರು. ಇನ್ನು ಮಹಾನಗರ ಪಾಲಿಕೆಗೆ ಬರುವ ಜನಸಾಮಾನ್ಯರು ವಿಶ್ರಾಂತಿ ಕೊಠಡಿಯಲ್ಲಿ ಫ್ಯಾನ್ ಹಾಕಿ ಕುಳಿತುಕೊಂಡಿದ್ದಕ್ಕೆ ಒಂದು ವಾರ ವಿದ್ಯುತ್ ಕನೆಕ್ಷನ್ ಕಡಿತಗೊಳಿಸಿದ ಆಯುಕ್ತರು ತಮ್ಮ ಚೇಂಬರಿನಲ್ಲಿ ಇಡೀ ದಿನ ಎಸಿ ಹಾಕಿ ಕುಳಿತುಕೊಳ್ಳುತ್ತಾರೆ! ಮಹಾನಗರ ಪಾಲಿಕೆಯ ವಿದ್ಯುತ್ ಬಿಲ್ಲನ್ನು ಜನಸಾಮಾನ್ಯರ ತೆರಿಗೆ ಹಣದಿಂದ ಕೊಡುವುದು. ಆಯುಕ್ತರ ಕಿಸೆಯಿಂದ ಅಲ್ಲವಲ್ಲ!
ಮಹಾನಗರ ಪಾಲಿಕೆ ಆಯುಕ್ತರು ತಾನು ಇಲ್ಲಿಗೆ 1.5 ಕೋಟಿ ಕೊಟ್ಟು ಬಂದಿದ್ದು ಎಂದು ಯಾವುದೇ ಮುಲಾಜಿಲ್ಲದೆ ಹೇಳುತ್ತಾರಂತೆ. ಕಟ್ಟಡದ File Complition Letter ಕೊಡಬೇಕಾದರೆ 5 ಲಕ್ಷ ರೂಪಾಯಿ ಕೇಳುತ್ತಾರಂತೆ. (ಇತ್ತೀಚೆಗೆ ಒಂದು ಡೀಲ್ ನಡೆದಿದೆ. ಈ ಬಗ್ಗೆ ದಾಖಲೆಯು ಇದೆ) Complition Letter ಕೊಡಬೇಕಾದರೆ ಸೆಟ್ ಬ್ಯಾಕ್ಸ್, ಕ್ಲಿಯರೆನ್ಸ್ ಎಲ್ಲವೂ ಇರಬೇಕು. ಆದರೆ ದುಡ್ಡು ಕೊಟ್ಟರೆ ಅದೆಲ್ಲವೂ ಇಲ್ಲ. ಇನ್ನೊಂದು ವಿಚಾರವೆಂದರೆ ಎಲ್ಲವೂ ಡೀಲ್ ನಡೆಯುತ್ತಿರುವುದು ಮಣ್ಣಗುಡ್ಡೆ ಕ್ವಾಟ್ರಸ್ ನಲ್ಲಿ! ಟಿಪಿಓ, ಇತರ ಅಧಿಕಾರಿಗಳು ಫೈಲ್ ಹಿಡಿದುಕೊಂಡು ಅಲ್ಲಿಗೆ ಹೋಗಬೇಕು. ಸೆಟ್ಟಿಂಗ್ ಎಲ್ಲವೂ ಅಲ್ಲೇ ಅಂತೆ!