ಮಾಲೀಕತ್ವ ಮರುಸ್ಥಾಪನೆ ಕಾನೂನು ಬಾಹಿರ: ಪರಿಶಿಷ್ಟರು ಜಮೀನು ಮಾರಿ ಮತ್ತೆ ಕೇಳಲಾಗದು; ಹೈಕೋರ್ಟ್ ಆದೇಶ

ರಾಜ್ಯ

ಒಮ್ಮೆ ಮಾರಿದ್ದ ಜಮೀನನ್ನು ಹಿಂಪಡೆದು ಮತ್ತೆ ಎರಡನೇ ಬಾರಿಗೆ ಮಾರಾಟ ಮಾಡುವುದು ಅಪರಾಧ ಪ್ರಕ್ರಿಯೆಯಾಗಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರವು ಮಂಜೂರು ಮಾಡಿದ್ದ ಜಮೀನನ್ನು ಕರ್ನಾಟಕ ಎಸ್ ಸಿ-ಎಸ್ ಟಿ ( ಕೆಲವು ಜಮೀನುಗಳ ಪರಭಾರೆ ನಿಷೇಧ- ಪಿಟಿಸಿಎಲ್) ಕಾಯ್ದೆಯಡಿ ಹಿಂಪಡೆದು, ಮತ್ತೆ ಮಾರಾಟ ಮಾಡಿ ಪುನಃ ತಮಗೆ ಹಿಂದಿರಿಗಿಸುವಂತೆ ನಿರ್ದೇಶನ ಕೋರಿ ಪಿಟಿಸಿಎಲ್ ಕಾಯ್ದೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರ ನಡೆ ಎಂದು ಹೈಕೋರ್ಟ್ ಹೇಳಿದೆ.

ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಎರಡನೇ ಬಾರಿ ಮಾರಾಟ ಮಾಡಿದ ಬಳಿಕ ಜಮೀನಿನ ಹಕ್ಕುಗಳನ್ನು ಮರು ಸ್ಥಾಪಿಸಲು ಕೋರಿ ಮಂಜೂರುದಾರನ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಎಸ್ ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.

ಪಿಟಿಸಿಎಲ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರೂ ಸೆಕ್ಷನ್ 4(2) ರ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರ ಮಂಜೂರು ಮಾಡಿದ್ದ ಜಮೀನನ್ನು ಯಾವುದೇ ಕಾಲಮಿತಿ ಇಲ್ಲದೆ ಪುನಃ ಪಡೆದುಕೊಳ್ಳುವುದಕ್ಕೆ ಅವಕಾಶ ಇದೆ. ಜತೆಗೆ ಸೆಕ್ಷನ್ 4 ರ ಪ್ರಕಾರ ಮೊದಲ ಬಾರಿಗೆ ಮಾರಾಟ ಮಾಡಿ ಮತ್ತೆ ಹಕ್ಕು ಪಡೆದುಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ಮಂಜೂರುದಾರರು ಒಮ್ಮೆ ಮಾರಾಟ ಮಾಡಿದ ಬಳಿಕ ಅದರ ಹಕ್ಕು ಪಡೆದು ಮತ್ತೆ ಮಾರಾಟ ಮಾಡಿ ಪುನಃ ಮಾಲೀಕತ್ವ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕಾಯ್ದೆಯಲ್ಲಿ ವಿವರಣೆ ನೀಡಿಲ್ಲ. ಆದರೆ ಮಂಜೂರುದಾರರ ಪರವಾಗಿ ಭೂಮಿ ನೀಡಿ ಆದೇಶದ ಬಳಿಕವೂ ಸರಕಾರದ ಅನುಮತಿ ಪಡೆಯದೇ ಮತ್ತೊಮ್ಮೆ ಮಾರಾಟ ಮಾಡುವುದಕ್ಕೆ ಮುಂದಾಗಬಹುದಾಗಿದೆ. ಈ ಪ್ರಕ್ರಿಯೆ ಪಿಟಿಸಿಎಲ್ ಕಾಯ್ದೆಯ ಸಂಪೂರ್ಣ ದುರುಪಯೋಗಕ್ಕೆ ಕಾರಣವಾಗಲಿದೆ. ಆದ್ದರಿಂದ ಸರಕಾರದಿಂದ ಜಮೀನು ಮಂಜೂರಾಗಿದ್ದ ವ್ಯಕ್ತಿ ಆ ಜಮೀನನ್ನು ಎರಡನೇ ಬಾರಿ ಮಾರಾಟ ಮಾಡಿ ಮತ್ತೆ ಜಮೀನಿನ ಹಕ್ಕು ಕೋರುವುದಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

ಜತೆಗೆ ಮಂಜೂರುದಾರರು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಬಳಿಕವೂ ಅದರ ಸೌಲಭ್ಯ ಪಡೆದುಕೊಂಡಂತಾಗಲಿದೆ. ಆದ್ದರಿಂದ ಸೆಕ್ಷನ್ 4 ರಡಿ ಈ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಒಮ್ಮೆ ಮಾರಿದ್ದ ಜಮೀನನ್ನು ಹಿಂಪಡೆದು ಮತ್ತೆ ಎರಡನೇ ಬಾರಿಗೆ ಮಾರಾಟ ಮಾಡುವುದು ಅಪರಾಧ ಪ್ರಕ್ರಿಯೆಯಾಗಲಿದೆ. ಕಾನೂನಿನಿಂದ ಪರಿಹಾರ ಪಡೆದು ಅಪರಾಧ ಚಟುವಟಿಕೆಗಳನ್ನು ಶಾಶ್ವತಗೊಳಿಸುವುದಕ್ಕೆ ನ್ಯಾಯಾಲಯ ಅವಕಾಶ ನೀಡಲಾಗದು ಎಂದು ಪೀಠ ಹೇಳಿದೆ.

ಅರ್ಜಿದಾರೆ ರುದ್ರಮ್ಮ ಅವರ ಪತಿ ಸಿದ್ದಪ್ಪ ಅವರಿಗೆ ದಾವಣಗೆರೆ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ 1961 ರ ನವೆಂಬರ್ ನಲ್ಲಿ 2 ಎಕರೆ 2 ಗುಂಟೆ ಜಮೀನನ್ನು 15 ವರ್ಷಗಳ ಕಾಲ ಪರಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸಿ ಸರಕಾರ ಮಂಜೂರು ಮಾಡಿತ್ತು. ಸಿದ್ದಪ್ಪ ಈ ಜಮೀನನ್ನು 1970 ಏಪ್ರಿಲ್ ನಲ್ಲಿ ಜಿ. ಕೊಟ್ರಪ್ಪ ಎಂಬುವವರಿಗೆ 400 ರೂಪಾಯಿಗೆ ಮಾರಾಟ ಮಾಡಿದ್ದರು. ಇದೇ ಜಮೀನನ್ನು ಕೊಟ್ರಪ್ಪ ಅವರು ಶರಣಪ್ಪ ಎಂಬುವರಿಗೆ 1000 ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಇದಾದ 10 ವರ್ಷಗಳ ನಂತರ ಮಂಜೂರುದಾರರಾದ ಸಿದ್ದಪ್ಪ, ಪಿಟಿಸಿಎಲ್ ಕಾಯ್ದೆಯಡಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಉಪವಿಭಾಗಾಧಿಕಾರಿಗಳು 1984 ರ ಮಾರ್ಚ್ ನಲ್ಲಿ ಸಿದ್ದಪ್ಪನ ಪರ ನೀಡಿ ಆದೇಶಿಸಿದ್ದರು. ಇದಾದ ಒಂದೇ ತಿಂಗಳಿನಲ್ಲಿ ಸಿದ್ದಪ್ಪ ಆ ಜಮೀನನ್ನು ಗೌಡರ ಶಿವಪ್ಪ ಮತ್ತು ತುಂಗಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು. ಬಳಿಕ 2002 ರಲ್ಲಿ ಪಿಟಿಸಿಎಲ್ ಕಾಯ್ದೆಯಡಿ ಭೂಮಿ ಮತ್ತೆ ಸಿದ್ದಪ್ಪನಿಗೆ ಬಂದಿತ್ತು. ಇದನ್ನು ಪ್ರಶ್ನಿಸಿ ಜಮೀನನ್ನು ಎರಡನೇ ಬಾರಿ ಖರೀದಿಸಿದ್ದ ಗೌಡರ ಶಿವಪ್ಪ ಮತ್ತು ತುಂಗಮ್ಮ 2015 ರಲ್ಲಿ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿದ್ದರು. ಜಿಲ್ಲಾಧಿಕಾರಿ ಜಮೀನನ್ನು ಶಿವಪ್ಪ ಮತ್ತು ತುಂಗಮ್ಮ ಹೆಸರಿಗೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಜಮೀನಿನ ಮೂಲ ವಾರೀಸುದಾರರು ( ಸರಕಾರದಿಂದ ಮಂಜೂರಾದವರು) ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.