ರಾಜ್ಯದ ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇವಲ ಅಸೂಯೆಯಿಂದ ಸೃಷ್ಠಿಸಿದ ಊಹಾಪೋಹಗಳು. ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ರವರು ಸ್ಪಷ್ಟಪಡಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯಾರೋ ಹೇಳಿದ ವಿಷಯಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ನಾನು ಸಂವಿಧಾನ ಬದ್ಧವಾದ ಸ್ಪೀಕರ್ ಸ್ಥಾನದಲ್ಲಿದ್ದು, ಈ ಸ್ಥಾನಕ್ಕೆ ಅದರದ್ದೇ ಆದ ಘನತೆ, ಗೌರವವಿದೆ. ಯಾವುದೇ ದೂರುಗಳಿದ್ದಲ್ಲಿ ತನ್ನ ಕಚೇರಿಗೆ ಬಂದು ಲಿಖಿತವಾಗಿ ಸಲ್ಲಿಸಲಿ. ತಾನು ಖುದ್ದಾಗಿ ದೂರು ಸ್ವೀಕರಿಸಲು ತಯಾರಿದ್ದೇನೆ. ದೂರು ಸ್ವೀಕರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಸಾದಾರಣವಾದ ರೋಗಕ್ಕೆ ಮದ್ದು ಇದೆ. ಆದರೆ ಅಸೂಯೆ ಎಂಬ ರೋಗಕ್ಕೆ ಮದ್ದಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಅಸೂಯೆಯಿಂದ ಸೃಷ್ಟಿಯಾದಂತವುಗಳು ಎಂದು ಖಾದರ್ ಹೇಳಿದರು.
ನನ್ನ ವಿರುದ್ಧದ ಆರೋಪಗಳು ಇದು ಮೊದಲನೆಯದ್ದಲ್ಲ. ನನ್ನ ರಾಜಕೀಯದುದ್ದಕ್ಕೂ ಈ ರೀತಿಯ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಅದೆಲ್ಲವನ್ನು ನಾನು ತಾಳ್ಮೆಯಿಂದ ನಿಭಾಯಿಸಿದ್ದೇನೆ. ಮೊದಲ ಬಾರಿ ಶಾಸಕ ಆಗಿದ್ದಾಗಿಂದಲೂ ಈ ರೀತಿಯ ಮಾತುಗಳನ್ನು, ಆರೋಪಗಳನ್ನು ಕೇಳಿದ್ದೇನೆ ಎಂದು ಯು.ಟಿ. ಖಾದರ್ ಹೇಳಿದರು.
