ಇದು ಕೇವಲ ಒಂಬತ್ತು ವರ್ಷಗಳ ಹಿಂದೆ ನಡೆದ ರಸ್ತೆ ಡಾಮರೀಕರಣಗೊಂಡ ರಸ್ತೆಯ ಇಂದಿನ ಪರಿಸ್ಥಿತಿ. ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ.. ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ.. ಎಂದು ಅರ್ಥವಾಗದ ಸ್ಥಿತಿಯಲ್ಲಿದೆ.! ಇದು ನಾವೂರು ಗ್ರಾಮದ ಕೈಕಂಬ ಜಂಕ್ಷನ್ ನಿಂದ ಮೂರು ಮಾರ್ಗ ಸಂಪರ್ಕಿಸುವ ರಸ್ತೆಯ ಕಥೆ, ವ್ಯಥೆ.!
ನಾವೂರು ಗ್ರಾಮದ ಕೈಕಂಬ ಜಂಕ್ಷನ್ ನಿಂದ ಫಾರೆಸ್ಟ್ ಬಂಗಲೆಗೆ ಸಂಪರ್ಕಿಸುವ 1.40 ಕಿಮೀ ದೂರದ ರಸ್ತೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಬೆಳ್ತಂಗಡಿ ಇದರಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಮರೀಕರಣವನ್ನು 2017 ರಲ್ಲಿ ನಡೆಸಲಾಗಿತ್ತು. ಈ ರಸ್ತೆಯ 1 ಕಿಮೀ ರಸ್ತೆಯು ಇದೀಗ ಇಂಚಿ ಇಂಚಿಗೂ ಗುಂಡಿಯಾಗಿದ್ದು ಜನ , ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಬೇಸಿಗೆಯಲ್ಲಿ ಗುಂಡಿ ಮುಚ್ಚಲು ಮಣ್ಣು ಹಾಕಿದ್ದು , ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರಸ್ತೆ ಪೂರ್ತಿ ಕೆಸರುಮಯಗೊಂಡು ಕಂಬಳ ದ ಗದ್ದೆಯನ್ನು ನಾಚಿಸುವಂತಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಸೇರಿದಂತೆ ಫಾರೆಸ್ಟ್ ಬಂಗಲೆ, ಕಣಾಲು, ಕಾರಿಂಜ , ಕುಂಡಡ್ಕ, ಸುಳ್ಳೊಡಿ ಸೇರಿದಂತೆ ಅನೇಕ ಪ್ರದೇಶಗಳನ್ನು ಸಂಪರ್ಕಿಸುವ ಏಕೈಕ ಮತ್ತು ಅತಿ ಮುಖ್ಯ ರಸ್ತೆ ಇದಾಗಿದೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜ್ ಗಳಿಗೆ ಇದೇ ಕೆಸರುಮಯ ರಸ್ತೆಯಲ್ಲಿ ಸಂಚಾರಿಸಬೇಕಾಗಿದೆ.
ನೂರಾರು ಜನರು ದಿನನಿತ್ಯದ ಕೆಲಸಕಾರ್ಯಗಳಿಗೆ ಇದೇ ರಸ್ತೆಯಲ್ಲಿ ಸಂಚಾರಿಸುವುದು ಅನಿವಾರ್ಯವಾಗಿದೆ. ದ್ವಿಚಕ್ರ ವಾಹನಗಳು ಸೇರಿದಂತೆ ಆಟೋ ರಿಕ್ಷಾಗಳು, ಖಾಸಗಿ ವಾಹನಗಳಲ್ಲಿ ತೆರಳುವವರು ಅಡ್ಡಾದಿಡ್ಡಿಯಾಗಿ ಸಂಚಾರಿಸುವಂತಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಅಪಘಾತಗಳೂ ಸಂಭವಿಸಿದೆ. ಅಂಗನವಾಡಿ, ಕಿ.ಪ್ರಾ ಶಾಲೆ ಸೇರಿದಂತೆ ಹಾಲು ಉತ್ಪಾದಕರ ಸಂಘಗಳು ಕೂಡ ಈ ಪ್ರದೇಶದಲ್ಲಿದೆ. ಆದರೂ ರಸ್ತೆ ಮಾತ್ರ ಯಾವುದೇ ಜನವಸತಿ ಇಲ್ಲದಿರುವ ರಸ್ತೆಯಂತಿರುವುದು ಮಾತ್ರ ದುರಂತ.!
