ಬಾಬಾ ರಾಮದೇವ್ ಅವರ ಔಷಧಿ ಕಂಪನಿಯ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಿಗೆ ರದ್ದು

ರಾಷ್ಟ್ರೀಯ

ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪೆನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.

ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನೆಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನ ಕೋಪಕ್ಕೂ ತುತ್ತಾಗಿದ್ದಾರೆ.

ಉತ್ತರಾಖಂಡ ಸರಕಾರವು ಏಪ್ರಿಲ್ 15 ರಂದು ಈ ಅಮಾನತು ಆದೇಶ ಹೊರಡಿಸಿದೆ. ಆಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.