ಜಿಲ್ಲೆಯ ಶಾಸಕರು ಕಾರ್ಪೊರೇಟ್ ವೈದ್ಯಕೀಯ ಲಾಬಿಯ ಸೂತ್ರದ ಗೊಂಬೆಗಳು: ಮುನೀರ್ ಕಾಟಿಪಳ್ಳ ಆರೋಪ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶ ರದ್ದುಗೊಳಿಸಬೇಕು, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬಜ್ಪೆ ಪೇಟೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ಮಾನವ ಸರಪಳಿಗೆ ಪೂರ್ವದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ಸಂಚಾಲಕ ಮುನೀರ್ ಕಾಟಿಪಳ್ಳ, ಜಿಲ್ಲೆಯಲ್ಲಿ ಇರುವ ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಜನರು ಹೋರಾಟ ನಡೆಸುತ್ತಿದ್ದರೆ, ಸರಕಾರ ಮತ್ತೆ 3 ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿ ನೀಡಿದೆ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದರೆ, ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಧಾರೆ ಎರೆಯುವ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಆರೋಗ್ಯ ಸಚಿವ ಯು.ಟಿ ಖಾದರ್ ಅವರಿಗೆ ಸರಕಾರಿ ಆಸ್ಪತ್ರೆಗಳ ಕುರಿತು ಯಾವುದೇ ಕಾಳಜಿ ಇಲ್ಲ. ಬದಲಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಬೇಡಿಕೆಗಳನ್ನು ಪೂರೈಸಲು ಟೊಂಕಕಟ್ಟಿ ನಿಂತಿದ್ದಾರೆ. ಜಿಲ್ಲೆಯ ಶಾಸಕರುಗಳು ಕಾಂಗ್ರೆಸ್, ಬಿಜೆಪಿ ಎಂದು ಬೇಧ ಇಲ್ಲದೆ ವಿಧಾನ ಸಭೆಯಲ್ಲಿ ಕಂಬಳ, ಕೋಳಿ ಅಂಕದ ಕುರಿತು ಧ್ವನಿ ಎಬ್ಬಿಸುತ್ತಾರೆಯೆ ಹೊರತು ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಕುರಿತು ಚಕಾರ ಶಬ್ದ ಎತ್ತುತ್ತಿಲ್ಲ. ಇವರೆಲ್ಲರೂ ಕಾರ್ಪೊರೇಟ್ ವೈದ್ಯಕೀಯ ಲಾಬಿಗಳ ಸೂತ್ರದ ಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ ಮಾತನಾಡುತ್ತಾ, ಸರಕಾರಿ ಆಸ್ಪತ್ರೆಗಳು ಖಾಸಗಿ ಪಾಲಾದರೆ ಬಡವರು, ಶ್ರಮಿಕರು ಆರೋಗ್ಯದ ಹಕ್ಕಿನಿಂದ ಪೂರ್ತಿ ವಂಚಿತರಾಗಲಿದ್ದಾರೆ. ಆರೋಗ್ಯ ಕೇಂದ್ರಗಳ ಖಾಸಗೀಕರಣವನ್ನು ಸಚಿವ ಯು. ಟಿ ಖಾದರ್ ತಕ್ಷಣ ಕೈ ಬಿಡಬೇಕು, ಇಲ್ಲದಿದ್ದಲ್ಲಿ ಹೋರಾಟ ಗಂಭೀರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು. ಕೈಗಾರಿಕಾ ಪಟ್ಟಣ ಬಜ್ಪೆಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಯ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಯಲಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಮಾಜಿ ಜಿಲ್ಲಾ, ಸಂಚಾಲಕ ರಘು ಎಕ್ಕಾರು, ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಬಜ್ಪೆ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಜಿಲ್ಲಾ ಸಮಿತಿ ಸದಸ್ಯೆ ವಸಂತಿ ಕುಪ್ಪೆಪದವು, ಡಿವೈಎಫ್ಐ ಜಿಲ್ಲಾ ಮುಖಂಡ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ, ಸಿಲ್ವಿಯಾ ಜೋಕಟ್ಟೆ, ಬಜ್ಪೆ ಚರ್ಚ್ ಸಾಮಾಜಿಕ ಅಭಿವ್ಯದ್ದಿ ಸಮಿತಿ ಸಂಚಾಲಕ ಜಾನ್ ಪೀಟರ್ ಡಿ ಸೋಜ, ಬಜ್ಪೆ ಚರ್ಚ್ ಸಂಯೋಜಕರಾದ ಸ್ಟಾನಿ ರೋಡ್ರಿಗ್ರಸ್, ಆಮ್ ಆದ್ಮಿ ಪಕ್ಷದ ರಾಬರ್ಟ್ ರೇಗೊ, ವಿವಿಧ ಸಂಘಟನೆಗಳ ಪ್ರಮುಖರಾದ ಶ್ರೀನಾಥ್ ಕುಲಾಲ್, ಮಂಜಪ್ಪ ಪುತ್ರನ್, ಖಾದರ್ ಇಡ್ಮಾ, ಬಾವಾ ಪದರಂಗಿ, ಬಾಬು ಸಾಲ್ಯಾನ್ ತಿರುವೈಲು, ನೋಣಯ್ಯ ಗೌಡ, ಹಸೈನಾರ್ ಜೋಕಟ್ಟೆ, ನಾಗೇಶ್ ಚಿಲಿಂಬಿ, ರಾಜಯ್ಯ ಮಂಗಳೂರು, ರುಕ್ಕಯ್ಯ ಕರಂಬಾರು, ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ, ನ್ಯಾಯವಾದಿ ವಿನೋದರ ಪೂಜಾರಿ ಮತ್ತಿತರರು ನೇತೃತ್ವ ವಹಿಸಿದ್ದರು.
