ಕಾಂಗ್ರೆಸ್ಸಿನ ಹೈಕಮಾಂಡ್ ಬುಲಾವ್ ಮೇರೆಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೋಮವಾರ ದೆಹಲಿಗೆ ದೌಡಾಯಿಸಿದ್ದಾರೆ.ಅಭ್ಯರ್ಥಿಗಳ ಮೂರನೇ ಪಟ್ಟಿಗೆ ಬಿಡುಗಡೆ ಭಾಗ್ಯ ಇನ್ನೂ ದೊರೆಯಲೇ ಇಲ್ಲ.ಎರಡು ಬಾರಿಯಾಗಿ 166 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೂ ಬಾಕಿ ಇರುವ 58 ಕ್ಷೇತ್ರಗಳ 3ನೇ ಪಟ್ಟಿ ಹೈಕಮಾಂಡಿಗೆ ತಲೆ ನೋವಾಗಿ ಪರಿಣಮಿಸಿದೆ.58 ಕ್ಷೇತ್ರದ ಬಗ್ಗೆ ಅಂತಿಮ ತೀರ್ಮಾನ ಮಾಡಲು ಎಐಸಿಸಿ ಅಧ್ಯಕ್ಷರಾದ ಖರ್ಗೆಯವರ ಕರೆ ಮೇರೆಗೆ ಡಿಕೆಸಿ ಹಾಗೂ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದ್ದರು. ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿದರೂ ಪಟ್ಟಿ ಬಿಡುಗಡೆ ನಿರೀಕ್ಷೆ ಹುಸಿಯಾಗಿದೆ.
ಸಭೆಯ ಮೇಲೆ ಸಭೆ ನಡೆಸಿದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ವಿಳಂಬ ಆಗುತ್ತಿರುವುದಕ್ಕೆ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂಡಿದ ಅಸಮಾಧಾನ ಹೊಗೆಯಾಡುವುದರಿಂದ ಮತ್ತಷ್ಟು ವಿಳಂಬ ಮಾಡಬಾರದು ಎಂಬುದು ರಾಜ್ಯ ಮಟ್ಟದ ನಾಯಕರ ಅಪೇಕ್ಷೆ. ಇದರ ಹೊರತಾಗಿಯೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ವಿಳಂಬ ಆಗುತ್ತಿದೆ ಎನ್ನಲಾಗಿದೆ. ರಾಜ್ಯದ ಈ ಇಬ್ಬರು ನಾಯಕರನ್ನು ಹೊರಗಿಟ್ಟು ಖರ್ಗೆ ಸೇರಿದಂತೆ ಹೊಸದಿಲ್ಲಿಯಲ್ಲಿರುವ ಮುಂಚೂಣಿ ನಾಯಕರು ಶನಿವಾರ ಹಾಗೂ ರವಿವಾರ ಸರಣಿ ಸಭೆಗಳನ್ನು ನಡೆಸಿ ಸಂಭವನೀಯ ಅಭ್ಯರ್ಥಿಗಳ 3ನೇ ಪಟ್ಟಿ ತಯಾರಿಸಿದ್ದರು.ಅ ಪಟ್ಟಿಗೆ ಸಂಬಂಧ ಪಟ್ಟಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರವರ ಅಭಿಪ್ರಾಯ ತಿಳಿಯಲು ಅವರನ್ನು ದೆಹಲಿಗೆ ಕರೆಸಲಾಗಿತ್ತು ಎಂದು ಮೂಲಗಳು ತಿಳಿದುಬಂದಿದೆ.