ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತ ರೀತಿಯ ಯಶಸ್ಸು ಕಂಡಿದ್ದು, ಬಿಜೆಪಿಯ ಸ್ವಯಂಕೃತ ಅಪರಾಧ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿದೆ. ಪ್ರಬಲ ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ಕೆಂಡಾಮಂಡಲರಾಗಿರುವ ಶೆಟ್ಟರ್ ಶಿರಸಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಂದೇ ಬೆಂಗಳೂರಿಗೆ ತೆರಳಿ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಬಿಜೆಪಿಯಿಂದ ಟಿಕೆಟ್ ವಂಚಿತವಾದ ಬೆನ್ನಲ್ಲೇ ಅಸಮಾಧಾನಗೊಂಡಿದ್ದರು. ಈ ಬೆನ್ನಲ್ಲೇ ದೆಹಲಿಗೆ ಹೋಗಿ ಹೈಕಮಾಂಡ್ನೊಂದಿಗೆ ಚರ್ಚೆ ನಡೆಸಿದ್ದರು. ಶನಿವಾರ ರಾತ್ರಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಷಿ ಮತ್ತು ಸಿಎಂ ಬೊಮ್ಮಾಯಿ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಭಾನುವಾರ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಇಂದೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಬಿಜೆಪಿಗೆ ಗುಡ್ ಬೈ ಹೇಳಿದ ಬಳಿಕ ಶೆಟ್ಟರ್, ಕಾಂಗ್ರೆಸ್ಗೆ ಸೇರಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಜಗದೀಶ್ ಶೆಟ್ಟರ್ ಸ್ವಾಗತಕ್ಕೆ ಈಗಾಗಲೇ ಕಾಂಗ್ರೆಸ್ ವೇದಿಕೆ ಸಿದ್ಧಗೊಂಡಿದ್ದು, ಶೆಟ್ಟರ್ರನ್ನು ಕರೆತರಲು ಹುಬ್ಬಳ್ಳಿಯಿಂದ 2 ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.
ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಹೆಸರಿನಲ್ಲಿ ಹೆಲಿಕಾಪ್ಟರ್ ಬುಕ್ ಆಗಿದ್ದು, ಮಧ್ಯಾಹ್ನದ ನಂತರ ಶೆಟ್ಟರ್ ಬೆಂಗಳೂರಿಗೆ ತೆರಳಲಿದ್ದಾರೆ. ಶಿರಸಿಯಿಂದ ವಾಪಸ್ ಆದ ಬಳಿಕ ಬೆಂಗಳೂರು ಕಡೆ ಮುಖಮಾಡಲಿದ್ದು, ಈ ವೇಳೆ ಶೆಟ್ಟರ್ ಜೊತೆ ಮಾಜಿ ಶಾಸಕರು, ಕೆಲ ನಿಗಮ ಮಂಡಳಿ ಅಧ್ಯಕ್ಷರು ಕಾಂಗ್ರೆಸ್ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.