ನಮ್ಮದು ಜಾತ್ಯಾತೀತ ರಾಷ್ಟ್ರ. ಜಾತ್ಯಾತೀತತೆಯ ಮೌಲ್ಯಗಳನ್ನೇ ಬುಡಮೇಲು ಮಾಡಿ ಅದರ ಆಶಯಗಳಿಗೆ ವಿರುದ್ಧವಾಗಿ ಯುವಜನರನ್ನು ಧಿಕ್ಕುತಪ್ಪಿಸುವ ಮತಾಂದ ಶಕ್ತಿಗಳಿಂದ ಮತ್ತು ಅಂತಹ ಒಡೆದಾಳುವ ನೀತಿಗಳಿಂದ ಈ ದೇಶಕ್ಕೆ ಅಪಾಯ ಕಾದಿದೆ . ಪ್ರಸಕ್ತ ಕಾಲಘಟ್ಟದಲ್ಲಿ ಯುವತಲೆಮಾರು ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕೆಂದು ಶಾಫೀ ನರ್ಸಿಂಗ್ ಹೋಮ್ ನ ವೈದ್ಯರಾದ ಡಾ ಚರಣ್ ರವರು ಭಗತ್ ಸಿಂಗ್ ಭವನದಲ್ಲಿ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಡಿವೈಎಫ್ಐ ಮುಖಂಡ ಕಾಂ ಶ್ರೀನಿವಾಸ್ ಬಜಾಲ್ ಅವರ 21 ನೇ ವರುಷದ ಹುತಾತ್ಮ ದಿನ ಅಂಗವಾಗಿ ನಡೆದ ರಕ್ತದಾನ ಶಿಬಿರ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿಯಲ್ಲಿ ಧರ್ಮದ ಆಧಾರದ ರಾಜಕಾರಣಕ್ಕೆ ಇಂದಿನ ಯುವಜನತೆ ಬಲಿಯಾಗುತ್ತಿದ್ದಾರೆ. ಬಹುತೇಕ ಹಿಂದುಳಿದ ವರ್ಗದ, ಬಡವರ ಮನೆಯ ಯುವಕರು ವಿಭಜನೆಯ ರಾಜಕಾರಣಕ್ಕೆ ಕಾಲಾಳುಗಳಾಗಿ ದಾರಿ ತಪ್ಪುತಿದ್ದಾರೆ. ಇಂತಹ ದಾರಿ ತಪ್ಪಿಸುವ ಮತೀಯ ಸಂಘಟನೆಗಳ ನಡುವೆ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದು ಈ ನಾಡಿನ ಅಸಮಾನತೆಯ ವಿರುದ್ಧ, ಅನ್ಯಾಯಗಳ ವಿರುದ್ಧ ರಾಜೀರಹಿತ ಹೋರಾಟಗಳನ್ನು ನಡೆಸುತ್ತಿರುವ ಡಿವೈಎಫ್ಐ ಸಂಘಟನೆ ಈ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ. ಸಮಾಜವನ್ನು ಓಡೆಯುವಂತಹ ಸಂಘಟನೆಗಳಲ್ಲಿ ತೊಡಗಿಸಿ ದಾರಿ ತಪ್ಪುವ ಬದಲಾಗಿ, ದೇಶದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸದಾ ಹೋರಾಟದ ಪಥದಲ್ಲಿರುವ ಡಿವೈಎಫ್ಐ ಸಂಘಟನೆಯಲ್ಲಿ ಸೇರಿ ಸಮಾಜವನ್ನು ಕಟ್ಟುವಂತಾಗಬೇಕೆಂದರು. ಶ್ರೀನಿವಾಸ್ ಬಜಾಲ್ ಅವರ ನೆನಪಿನಲ್ಲಿ ಕಳೆದ 21 ವರುಷಗಳಿಂದ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಇನ್ನೊಂದು ಜೀವಗಳನ್ನು ಉಳಿಸುವಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಡಿವೈಎಫ್ಐ ಸಂಘಟಿಸುವ ಸಮಾಜಮುಖಿ ಕೆಲಸಗಳು ಯಶಸ್ವಿಯಾಗಿ ನಡೆಯಲಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ರೆಡ್ ಕ್ರಾಸ್ ಸಂಸ್ಥೆಯ ಕೌನ್ಸಿಲರ್ ಗಣೇಶ್, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀನಿವಾಸ್ ಬಜಾಲ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ 55 ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು ಡಿವೈಎಫ್ಐ ಮುಖಂಡ ಧಿರಾಜ್ ಬಜಾಲ್ ಸ್ವಾಗತಿಸಿ, ನಾಗರಾಜ್ ಬಜಾಲ್ ಪ್ರಸ್ತಾವಿಕ ಮಾತನಾಡಿ ನಿರೂಪಿಸಿದರು, ಕಾರ್ಯದರ್ಶಿ ಆನಂದ ಎನೆಲ್ಮಾರ್ ವಂದಿಸಿದರು.