ಅಧಿಕಾರಿಗಳ ಅಂಧಾದುಂಧಿ ದರ್ಬಾರಿಗೆ ಇದೊಂದು ಅಪ್ಪಟ ಉದಾಹರಣೆ. ಗುರುಪುರ ಕೈಕಂಬದ ಮರ್ಕಝ್ ನಗರದ ಹತ್ತಿರವಿರುವ LUSHY GREENERY RESIDENTIAL LAYOUT ಮತ್ತು ADYANTHAYA FARMS ಎಂಬ ಹೆಸರಿನಲ್ಲಿ ಅರಬಿ ಎಂಬ ಇಳಿಜಾರು ಪ್ರದೇಶದಲ್ಲಿ ಲೇ ಔಟ್ ನಿರ್ಮಿಸಲಾಗಿದೆ.

ಇಡೀ ಗಂಜಿಮಠ ಗ್ರಾಮದ ಮಳೆ ನೀರು ಹರಿದು ಹೋಗುವ ‘ಅರಬಿ’ಎಂಬ ಹೆಸರಿನ ರಾಜಾ ಕಾಲುವೆಯೊಂದು ಈ ಪ್ರದೇಶದಲ್ಲಿದೆ. ಕೇವಲ ಮಳೆಗಾಲ ಮಾತ್ರವಲ್ಲ ಬೇಸಿಗೆ ಕಾಲದಲ್ಲೂ ಈ ರಾಜಾ ಕಾಲುವೆಯಲ್ಲಿ ಬೃಹತ್ ಪ್ರಮಾಣದಲ್ಲಿ ನೀರು ಹರಿಯುತ್ತಿರುತ್ತದೆ.ಈ ರಾಜಾ ಕಾಲುವೆಯನ್ನು ಅತಿಕ್ರಮಣ ಮಾಡಿ, ಕಾಲುವೆಗೆ ಮಣ್ಣು ಸುರಿದು, ಕಾಲುವೆಯನ್ನು ಕಿರಿದಾಗಿಸಿ, ಪ್ರಾಕೃತಿಕವಾಗಿ ನೀರು ಹರಿದು ಹೋಗುವ ರಾಜಾ ಕಾಲುವೆಗೆ ಪೈಪು ಅಳವಡಿಸಿ,ನೀರು ಹರಿಯುವ ದಿಕ್ಕನ್ನು ತಿರುಗಿಸಿ ಅದರ ಮೇಲೆ ಮಣ್ಣು ಹಾಕಿ ಸಮತಟ್ಟುಗೊಳಿಸಿ, ಲೇಔಟ್ ಮಾಡಿದ ಪರಿಣಾಮ ನಿರಂತರವಾಗಿ ಸುರಿಯುತ್ತಿರುವ ಮಳೆ ನೀರಿನ ರಭಸಕ್ಕೆ ಅಳವಡಿಸಿದ ಪೈಪುಗಳು ಕಿತ್ತು ಹೋಗಿ ಇದೀಗ ಆ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಸುತ್ತ ಮುತ್ತಲಿನ ನಿವಾಸಿಗಳು ಬಹಳ ಆತಂಕಕ್ಕಿಡಾಗಿದ್ದಾರೆ. ನಿರಂತರ ಮಳೆಯಾದರೆ ಭಾರಿ ಮಟ್ಟದ ಭೂ ಕುಸಿತವಾಗುವ ಸಾಧ್ಯತೆಯು ಹೆಚ್ಚಿದೆ.

ಸದ್ರಿ ಲೇಔಟ್ ಗೆ ಗಂಜಿಮಠ ಗ್ರಾಮಪಂಚಾಯತ್ ನಿಂದ ದಾಖಲೆ ಪತ್ರ ನೀಡಲಾಗಿದೆ.9/11, ಭೂ ಪರಿವರ್ತನಾ ಮಾಡಿ ರಾಜಾ ಕಾಲುವೆಯ ಮೇಲೆಯೇ ಲೇಔಟ್ ನಿರ್ಮಿಸಿದರೂ ಪಂಚಾಯತ್ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ತುಟಿ ಪಿಟಿಕ್ ಎನ್ನಲಿಲ್ಲ.ಸ್ಥಳ ಪರಿಶೀಲನೆ ಮಾಡದೆ ಕಾಲುವೆಯನ್ನು ಗಣನೆಗೆ ತೆಗೆದು ಕೊಳ್ಳದೆ ಕಣ್ಣು ಮುಚ್ಚಿ ಕ್ಲಿಯೆರೆನ್ಸ್ ನೀಡಲಾಗಿತ್ತು.ಇದೆಲ್ಲವೂ ಕುರುಡು ಕಾಂಚಣದ ಮಾಯೆ.!!
ಇನ್ನು ನಿರಂತರ ಮಳೆಯಾದರೆ ಕೈಕಂಬ-ನಾಡಜೆ-ಮಳಲಿ ರಸ್ತೆ ಕುಸಿದು ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.! ಮಡಿಕೇರಿಯಲ್ಲಿ ಸಂಭವಿಸಿದ ಹಾಗೆ ಇಲ್ಲಿಯು ಭಾರಿ ಭೂ ಕುಸಿತವಾಗುವ ಸಾಧ್ಯತೆ ಇದೆ.ಮತ್ತೊಂದು ಮಡಿಕೇರಿ ಆಗುವ ಮುಂಚೆಯೇ ಸಂಬಂದ ಪಟ್ಟವರು ಎಚ್ಚೆತ್ತು ಕೊಳ್ಳಬೇಕಾಗಿದೆ.