ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ 512 ಅಪಘಾತ,123 ಜನರ ಸಾವು, 585 ಜನರಿಗೆ ಗಂಭೀರ ಗಾಯ.

ರಾಜ್ಯ

ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ವೇಯಲ್ಲಿ ಅಪಘಾತ ಸಂಖ್ಯೆ ಹೆಚ್ಚಳ ಸೇರಿದಂತೆ ಇರುವ ನ್ಯೂನತೆ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸುರಕ್ಷಿತ ಪ್ರಯಾಣ ಮತ್ತು ನ್ಯೂನತೆ ಸರಿಪಡಿಸಲು ಎಲ್ಲ ರೀತಿಯ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.ವಿಧಾನಪರಿಷತ್ತಿನಲ್ಲಿ ಎಂಎಲ್ ಸಿ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಕ್ಸ್‌ಪ್ರೆಸ್‌ ವೇ ನಲ್ಲಿನ ಅಪಘಾತಗಳು ಹೆಚ್ಚಾಗುತ್ತಿವೆ, ಟೋಲ್​​ಗೆ ಜನರ ಗಲಾಟೆಯಾಗುತ್ತಿದೆ, ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಲ್ಲುತ್ತಿದೆ ಎಂದಿದ್ದಾರೆ ಈ ಸಂಬಂಧ ಈಗಾಗಲೇ ಸಭೆ ಕರೆದು ಚರ್ಚೆ ಮಾಡಿದ್ದೇವೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣದಲ್ಲಿದೆ. ಲೋಪಗಳಿದ್ದಲ್ಲಿ ಅದನ್ನು ಪ್ರಾಧಿಕಾರದ ಜೊತೆ ಸಂಪರ್ಕ ಮಾಡಿ ಚರ್ಚಿಸಲಾಗುತ್ತದೆ. ಅಪಘಾತಕ್ಕೆ ಅತಿವೇಗ ಕಾರಣ, ಕೆಲವೆಡೆ ಅವೈಜ್ಞಾನಿಕ ಸಮಸ್ಯೆ ಇದೆ, ಎಲ್ಲ ನಿಯಂತ್ರಣ ಮಾಡಲು ಕ್ರಮ ವಹಿಸಲಾಗುತ್ತದೆ. ಎಲ್ಲ ಸಮಸ್ಯೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನಕ್ಕೂ ತಂದಿದ್ದೇವೆ. ಪರಿಶೀಲಿಸಿ ಕ್ರಮ ವಹಿಸಲಿದ್ದೇವೆ.2023ರ ಜನವರಿಯಿಂದ ಇಲ್ಲಿಯವರೆಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 512 ಅಪಘಾತಗಳು ವರದಿಯಾಗಿ, ಇದರಲ್ಲಿ 123 ಜನರು ಸಾವನ್ನಪ್ಪಿ,585 ಜನರಿಗೆ ಗಂಭೀರ ಗಾಯಗಳಾಗಿವೆ. ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.