ನೀವೊಮ್ಮೆ ಊಹಿಸಿಕೊಳ್ಳಿ.. ಬಿಜೆಪಿಗರು ಅಲ್ಲದ ಬೇರೆ ಪಕ್ಷದವರು ಇಂತಹ ಕೆಲಸ ಮಾಡಿದ್ದರೆ ಏನಾಗುತ್ತಿತ್ತು. ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರುತ್ತಿತ್ತು? ದೇವರ ಮೂರ್ತಿಯಲ್ಲೇ ಹಣ ಕೊಳ್ಳೆ ಹೊಡೆದವರು, ಇಂತಹವರು ಹಿಂದೂಗಳೇ? ಇತ್ತ ಸಂಘಪರಿವಾರದ ಸಂಘಟನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ಕೊಡುತ್ತಿತ್ತು? ಹಿಂದುತ್ವಕ್ಕಾದ ಅವಮಾನ ಎಂದು. ಆದರೆ ಏನು ಮಾಡುವುದು, ಇದು ಮಾಡಿದ್ದು ಓರ್ವ ಬಿಜೆಪಿ ಶಾಸಕ, ಅದರಲ್ಲೂ ಪ್ರಖರ, ಹಿಂದುತ್ವವಾದಿ ಶಾಸಕ.
ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಥೀಂ ಪಾರ್ಕ್ ನಲ್ಲಿ ಬೃಹತ್ ಗಾತ್ರದ ಕಂಚಿನ ಪರಶುರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಲೋಕಾರ್ಪಣೆಗೊಳಿಸಿದ್ದರು. ಕಾರ್ಕಳ ಶಾಸಕರಿಗೆ ಚುನಾವಣೆಯಲ್ಲಿ ಇದು ದೊಡ್ಡ ಮೈಲೇಜನ್ನು ಕೊಟ್ಟಿತು. ನಿಮಗೆ ಗೊತ್ತಿರಬಹುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40 ಪರ್ಸೆಂಟ್ ಕಮಿಷನ್ ದೊಡ್ಡ ಸದ್ದು ಮಾಡಿತ್ತು. ಪರಶುರಾಮನ ಮೂರ್ತಿಯಲ್ಲೂ ಹಿಂದುತ್ವ ನಾಯಕರು ಕಮಿಷನ್ ಹೊಡೆದಿರಬೇಕು. ಅಲ್ಲಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಕಂಚಿನ ಬದಲು ಬೇರೆಯದ್ದೇ ಪ್ರತಿಮೆ ನಿರ್ಮಿಸಿದ್ದರು. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ಈ ಮೂರ್ತಿ ಬಗ್ಗೆ ಸಂದೇಹ ವ್ಯಕ್ತಪಡಿಸಲಾಗಿತ್ತು. ಕಾರ್ಕಳದ ಕಾಂಗ್ರೆಸ್ ಮುಖಂಡರು, ಸಾಮಾಜಿಕ ಮುಂದಾಳುಗಳು ಪರಶುರಾಮ ಮೂರ್ತಿ ನಕಲಿ ಎಂಬ ಸುದ್ದಿಯನ್ನು ಹಬ್ಬಿಸಿದರು. ಇದು ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಜಿಲ್ಲಾ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಇದು ನಕಲಿ ಮೂರ್ತಿ ಎಂದು ಹೇಳಿಕೆ ಕೊಟ್ಟಿದ್ದರು. ತನಿಖೆ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದರು. ಇದೀಗ ರಾತ್ರೋರಾತ್ರಿ ಪರಶುರಾಮ ಮೂರ್ತಿ ಮಾಯವಾಗಿದೆ. ನಕಲಿ ಅನ್ನುವುದಕ್ಕೆ ಇದು ದೊಡ್ಡ ಸಾಕ್ಷಿ. ಸಾರ್ವಜನಿಕರಿಗೆ ಅಧಿಕಾರಿಗಳು ನಿಷೇಧ ಹೇರಿ ಈ ಮೂರ್ತಿಯನ್ನು ಅಲ್ಲಿಂದ ಹೈಜಾಕ್ ಮಾಡಿದ್ದಾರೆ.

ಸ್ಥಳೀಯ ಶಾಸಕರು ಪ್ರಖರ ಹಿಂದುತ್ವವಾದಿ ಗಳು. ಅವರು ಹಿಂದೂಗಳಿಗೆ ಅನ್ಯಾಯವಾದರೆ ಸುಮ್ಮನೆ ಬಿಡುವುದಿಲ್ಲವಂತೆ. ಆದರೆ ಬಹುಪಾಲು ಹಿಂದೂಗಳು ಆರಾಧಿಸುವ ಪರಶುರಾಮ ನನ್ನೇ ಬಿಟ್ಟಿರದವರು ಎಂತಹ ಹಿಂದೂಗಳು ಇವರು? ಸಿಮೆಂಟ್ ಕದ್ದಂತೆ ಮೂರ್ತಿಯನ್ನೇ ಕದ್ದುಬಿಟ್ಟಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಸಮಗ್ರ ತನಿಖೆ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.