ಮಂಗಳೂರು: ಏಳು ವರ್ಷಗಳ ಹಿಂದೆ ಬಲ್ಮಠ ಸರ್ಕಲ್ ಬಳಿ ಅನಧಿಕೃತವಾಗಿ ಫ್ಲೇಕ್ಸ್ ಮತ್ತು ಬಂಟಿಂಗ್ಸ್ ಅಳವಡಿಸಿದ್ದು ಅದನ್ನು ತೆರವುಗೊಳಿಸುವ ಕರ್ತವ್ಯಕ್ಕೆ ನೇಮಿಸಿದ್ದಾರೆ ಎನ್ನಲಾದ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮಂಗಳೂರಿನ ಕಾರ್ಪೊರೇಟರ್ ವಿಜಯ್ ಕುಮಾರ್ ಶೆಟ್ಟಿ, ಹಿಂದಿನ ಮಹಾಪೌರರಾಗಿದ್ದ ದಿವಾಕರ್ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರ ಇವರುಗಳನ್ನು ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.
ದಿನಾಂಕ 08/03/2018 ರಂದು ಮಂಗಳೂರು ನಗರದ ಜ್ಯೋತಿ-ಬಲ್ಮಠ ರಸ್ತೆಯ ತೆರೆದ ಸ್ಥಳದಲ್ಲಿ ಹಾಕಲಾಗಿದ್ದ ಅನಧೀಕೃತ ಫಲಕ ಮತ್ತು ಬ್ಯಾನರ್ ಗಳನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಸೂಚನೆಯಂತೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೆರವು ಕಾಮಗಾರಿಯನ್ನು ನಡೆಸುತ್ತಿದ್ದಾಗ ವಿಜಯ್ ಕುಮಾರ್ ಶೆಟ್ಟಿ, ದಿವಾಕರ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರರವರುಗಳು ಸದ್ರಿ ಸರಕಾರಿ ಕರ್ತವ್ಯ ನಿರ್ವಹಣೆಯ ಕಾರ್ಯಕ್ಕೆ ತಡೆವೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅವರ ದೂರಿನಂತೆ ಮಂಗಳೂರು ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಖ್ಯೆಯ ಕಲಂ 353 ರಂತೆ ಪ್ರಕರಣ ದಾಖಲಿಸಿ, ಆರೋಪಿಗಳ ವಿರುದ್ಧ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸರಿ-ಸುಮಾರು 16 ಸಾಕ್ಷಿಗಳ ಪೈಕಿ 11 ಸಾಕ್ಷಿಗಳ ತನಿಖೆ ನಡೆಸಿತ್ತು. ಅಲ್ಲದೆ ದೂರಿನಲ್ಲಿನ ವಿಳಂಬ, ಸೂಕ್ತ ಸಾಕ್ಷ್ಯಧಾರಗಳ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು, ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ ಮತ್ತು ತನಿಖೆ ಯಲ್ಲಿನ ವಿರೋಧಾಬಾಸಗಳು ಈ ಪ್ರಕರಣವನ್ನು ಸಂಶಯತೀತವಾಗಿ ಸಾಬೀತುಪಡಿಸುವಲ್ಲಿ ವಿಫಲಗೊಂಡಿದೆ ಎಂದು ತೀರ್ಮಾನಿಸಿ, ಮಂಗಳೂರಿನ ಆರನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪೂಜಾಶ್ರೀ ಎಸ್ ರವರು ಆರೋಪಿಗಳನ್ನು ನಿರ್ದೋಷಿಗಳೆಂದು ಆದೇಶಿಸಿರುತ್ತಾರೆ.
ಆರೋಪಿಗಳ ಪರವಾಗಿ ಪುತ್ತೂರಿನ ‘ಕಜೆ ಲಾ ಚೇಂಬರ್ಸ್’ ಇದರ ಮುಖ್ಯಸ್ಥರು, ಖ್ಯಾತ ನಾಯವಾದಿಗಳಾದ ಶ್ರೀ ಮಹೇಶ್ ಕಜೆ ಮತ್ತು ಮಂಗಳೂರಿನ ಶ್ರೀ ಮಹೇಶ್ ಜೋಗಿ , ಶೀತಲ್ ಕುಮಾರ್ ಅವರು ವಾದಿಸಿದ್ದರು.
