ಫರಂಗಿಪೇಟೆ: ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು; 3.5 ಲಕ್ಷ ಮೌಲ್ಯದ ನಗ-ನಗದು ಕಳವು

ಕರಾವಳಿ

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೆರಿಯಾರ್ ನ ಬಾಲ್ಪಬೊಟ್ಟು ನಿವಾಸಿ ಮುಹಮ್ಮದ್ ಇಕ್ಬಾಲ್ ಮನೆಗೆ ಸೆಪ್ಟೆಂಬರ್ 8 ರಂದು ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ವರದಿಯಾಗಿದೆ.

ವೃತ್ತಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಇಕ್ಬಾಲ್ ಸೆಪ್ಟೆಂಬರ್ 8 ರಂದು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಸೆಪ್ಟೆಂಬರ್ 12 ರಂದು ಮನೆಗೆ ವಾಪಸ್ ಬಂದಾಗ ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದಿದ್ದು, ಬಾಗಿಲು ತೆರೆದುಕೊಂಡಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯೊಂದರ ಕಪಾಟಿನ ಬೀಗ ಒಡೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅದರೊಳಗಿದ್ದ 1.70 ಲಕ್ಷ ರೂ. ನಗದು, 1.80 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ ಪೆಂಡೆಂಟ್‌ ಸಹಿತ ಚಿನ್ನದ ಸರ, ಕಪಾಟಿನ ಮೇಲಿದ್ದ 4 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್‌ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.