ಉಡುಪಿ,ಮಾ.5 : ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಪುರುಷ ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸೋಮವಾರ ಗೌರವಯುತವಾಗಿ ನಡೆಸಲಾಯಿತು.
ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೆ, ಶವಗಳನ್ನು ಹೊತ್ತು ಸಾಗಿಸಲು ಕೈಜೋಡಿಸಿದರು. ಪೌರಾಯುಕ್ತರ ಮಾನವೀಯಪ್ರಜ್ಞೆ ಹೆಮ್ಮೆ ಅನಿಸಿತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ ಎಂದು, ಅನಾಥಶವಗಳ ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಹೇಳಿದರು.

ಖಾಸಗಿಯವರ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಅಪರಿಚಿತ ರೋಗಿಯ ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಮೃತರ ವಾರಸುದಾರರ ಬರುವಿಕೆಗಾಗಿ ಮಾದ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆ ಕಾಲಮಿತಿ ಕಳೆದರೂ ಮೃತರ ವಾರಸುದಾರರು ಬಾರದೆ ಇರುವುದರಿಂದ, ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.

ನಗರ ಠಾಣೆಯ ಪೋಲಿಸರು ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸ್ಪತ್ರೆ, ನಗರಸಭೆ ಅಂತ್ಯಸಂಸ್ಕಾರ ಕಾರ್ಯಕ್ಕೆ ಸಹಕಾರ ನೀಡಿತು. ವಿಕಾಸ್ ಶೆಟ್ಟಿ, ಪ್ರದೀಪ್ ಅಛ್ಜರಕಾಡು, ಸೋನಿ ಅಜ್ಜರಕಾಡು, ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ನೆರವಾದರು.
