ಇಬ್ಬರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿ
ಖಾಸಗಿ ಫೈನಾನ್ಸ್ ಕಂಪನಿಯೊಂದರ ಆಯಪ್ ಹ್ಯಾಕ್ ಮಾಡಿ ಎರಡು ತಾಸಿನಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ದೋಚಿದ್ದ ಸೈಬರ್ ವಂಚನೆ ಜಾಲದ ಇಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಸಂಜಯ್ ಪಾಟೀಲ್ ಹಾಗೂ ಬೆಳಗಾವಿಯ ಇಸ್ಮಾಯಿಲ್ ರಶೀದ್ ಅತ್ತಾರ್ ಬಂಧಿತ ಸೈಬರ್ ವಂಚಕರು. ಆರೋಪಿಗಳಿಂದ ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಿದ್ದ 10 ಕೋಟಿ ರೂ ಜಪ್ತಿ ಮಾಡಲಾಗಿದೆ. ಈ ವಂಚಕ ಜಾಲದ ಇಬ್ಬರು ಮಾಸ್ಟರ್ ಮೈಂಡ್ಗಳು ದುಬಾಯಿಯಲ್ಲಿದ್ದುಕೊಂಡು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆ ವಿಸ್ಡಂ ಫೈನಾನ್ಸ್ ಕಂಪನಿಯ ಆ್ಯಪ್ ಹ್ಯಾಕ್ ಮಾಡಿ ಹಣ ದೋಚಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಬೆಂಗಳೂರು ಸಿಸಿಬಿ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಾಜಸ್ಥಾನ ಹಾಗೂ ಬೆಳಗಾವಿಯಲ್ಲಿ ಇಬ್ಬರನ್ನು ಬಂಧಿಸಿದೆ. ವಿಸ್ಡಂ ಫೈನಾನ್ಸ್ ಕಂಪನಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ. ಈ ಕಂಪನಿ ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಹಕರಿಗೆ ಸಾಲ ಒದಗಿಸುತ್ತದೆ. ಇದಕ್ಕೆ ಗೂಗಲ್ ಪ್ಲೆ ಸ್ಟೋರ್ನಲ್ಲಿ ಪ್ರತ್ಯೇಕ ಆಯಪ್ ಗ್ರಾಹಕರಿಗೆ ನೀಡಿದೆ. ಈ ಆಯಪ್ ಅನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರ ಜಾಲ, ಎರಡೂವರೆ ಗಂಟೆಗಳಲ್ಲಿ 49 ಕೋಟಿ ರುಾಪಾಯಿ ದೋಚಿ 656 ವಿವಿಧ ನಕಲಿ ಖಾತೆಗಳಿಗೆ ವರ್ಗಾಯಿಸಿದ್ದರು. ರಾಜಸ್ಥಾನ ಮೂಲದ ಇಬ್ಬರು ಈ ಗ್ಯಾಂಗಿನ ಮಾಸ್ಟರ್ ಮೈಂಡ್ಗಳು ದುಬೈನಲ್ಲಿ ನೆಲೆಸಿದ್ದಾರೆ.
