ಲೇಡಿ ಬ್ಲ್ಯಾಕ್ಮೇಲರ್ ಅರ್ಚನಾ ನಾಗ್ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಶ್ರದ್ಧಾಂಜಲಿ ಬೆಹರಾಗೆ ಕೋರ್ಟ್ ಶಾಕ್ ನೀಡಿದೆ.ಇ.ಡಿ ನ್ಯಾಯಾಲಯವು ವೈಯಕ್ತಿಕವಾಗಿ ತನ್ನ ಮುಂದೆ ಹಾಜರಾಗುವಂತೆ ಶ್ರದ್ಧಾಂಜಲಿಗೆ ಸೂಚನೆ ನೀಡಿದೆ. ತನ್ನ ವಕೀಲರ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜಾರಾಗುತ್ತೇನೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶ್ರದ್ಧಾಂಜಲಿ ಬೆಹರಾಗೆ ಹಿನ್ನಡೆಯಾಗಿದ್ದು, ಮೇ 8 ರಂದು ಕೋರ್ಟ್ಗೆ ಖುದ್ದು ಹಾಜರಾಗಿರುವಂತೆ ಸೂಚನೆ ನೀಡಿದೆ.ಬಂಧನಕ್ಕೆ ಒಳಗಾಗುವ ಭೀತಿಯಲ್ಲಿರುವ ಶ್ರದ್ಧಾಂಜಿಲಿ, ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ಅನುಮತಿ ಕೋರಿದ್ದರು ಎಂದು ಮೂಲಗಳು ತಿಳಿಸಿವೆ.
ಅರ್ಚನಾ ಹಾಗೂ ಸಹಾಯಕಿ ಶ್ರದ್ದಾಂಜಲಿ ಬೆಹರ್ ಹನಿ ಟ್ರ್ಯಾಪ್ ಮಾಡುವ ಮೂಲಕ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವುದನ್ನೇ ತಮ್ಮ ಕೆಲಸವನ್ನಾಗಿ ಮಾಡಿಕೊಂಡಿದ್ದರು. ಒಡಿಶಾದ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಅಕ್ಷಯ ಪಾರಿಜಾರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಪ್ರಯತ್ನ ವಿಫಲವಾಗಿದೆ. ಇದರ ಬೆನ್ನಲ್ಲಿಯೇ ಆಕೆ ಜೈಲು ಪಾಲಾಗಿದ್ದು, ದಿನಕ್ಕೆ ಒಂದೊಂದು ಕಥೆಗಳು ಹೊರಬರುತ್ತಿವೆ.

ಅಂದಾಜಿನ ಪ್ರಕಾರ, 18 ಶಾಸಕರು ಸೇರಿದಂತೆ ರಾಜ್ಯದ 25 ಪ್ರಭಾವಿ ವ್ಯಕ್ತಿಗಳನ್ನು ಈಕೆ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾಳೆ. 2018 ರಿಂದ 2022ರವರೆಗೆ ಈಕೆ ವ್ಯಾಪಕವಾಗಿ ಇಂಥ ಕೆಲಸಗಳನ್ನು ಮಾಡಿದ್ದರು. ಇದರಿಂದಾಗಿ ಅಚರ್ನಾ ಹಾಗೂ ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಆಸ್ತಿ ಗಳಿಕೆ ಮಾಡಿದ್ದರು. ಈಕೆಯ ಹೆಸರಲ್ಲಿ ಮೂರು ಅಂತಸ್ತಿನ ಬಂಗಲೆಯಿದ್ದು, 50 ಲಕ್ಷಕ್ಕೂ ಅಧಿಕ ಬೆಲೆಯ ಪೀಠೋಪಕರಣಗಳು ಇವರ ಮನೆಯಲ್ಲಿದೆ. ಇದರ ನಡುವೆ ಆಕೆಯ ಟ್ರ್ಯಾಪ್ಗೆ ಬಿದ್ದ ಹೆಚ್ಚಿನವರು ಒಡಿಶಾದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಡಿಯ ಶಾಸಕರು ಎನ್ನಲಾಗಿದೆ.
