ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಹೆಸರಿನ ಸಂಸ್ಥೆ
ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿರುವ ಸಮೃದ್ಧಿ ಎಂಬ ಹೆಸರಿನ ಕಾಂಪ್ಲೆಕ್ಸ್ ನಲ್ಲಿ 2013ರಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ, ಸದ್ರಿ ಸಂಸ್ಥೆಯ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರ ಎಂಬಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದು, ಬೆನಿಫಿಟ್ ಸ್ಕೀಂ ಒಂದನ್ನು ಪ್ರಾರಂಭಿಸಿ ಏಜೆಂಟರುಗಳ ಮೂಲಕ ಸಾವಿರಾರು ಸಾರ್ವಜನಿಕರನ್ನು ಸದ್ರಿ ಸ್ಕೀಂ ಗೆ ಸದಸ್ಯರನ್ನಾಗಿ ಸೇರಿಸಿಕೊಂಡು ಅವರಿಂದ ಕೊಟ್ಯಾಂತರ ಹಣವನ್ನು ಸಂಗ್ರಹಿಸಿರುತ್ತಾರೆ.
ಸಂಗ್ರಹಿಸಿದ ಮೊತ್ತ 3,08,62,500/-(ಮೂರು ಕೋಟಿ ಎಂಟು ಲಕ್ಷದ ಅರವತ್ತೇರಡು ಸಾವಿರದ ಐನೂರು) ಸದ್ರಿ ಸ್ಕೀಂ ಸದಸ್ಯರುಗಳಿಗೆ ಹಣವನ್ನಾಗಲೀ, ಯಾವುದೇ ವಸ್ತುವನ್ನಾಗಾಲಿ ನೀಡದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಕ್ರ: 248/2014 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಒಟ್ಟು 8 ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣಾಧಿಕಾರಿಯವರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಸಮಕ್ಷಮ ನಡೆದು, ದಿನಾಂಕ 30:10:2025 ರಂದು ಈ ಆರೋಪಿಗಳ ಪೈಕಿ 2ನೇ, 4ನೇ ಮತ್ತು 5ನೇ ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅವರುಗಳಿಗೆ ದಿನಾಂಕ: 03-11-2025 ರಂದು ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಕಲಂ 409 ಮತ್ತು 420 ರಡಿಯಲ್ಲಿ ಸಹವಾಚಕ 149 ರೊಂದಿಗೆ ಎರಡೂ ಕಲಂಗಳಿಗೆ ಆರೋಪಿಗಳಿಗೆ ಪ್ರತ್ಯೇಕವಾಗಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು ರೂ. ಹತ್ತು ಸಾವಿರ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ.
ಉಳಿದ 3, 6, 7ನೇ ಮತ್ತು 8ನೇ ರವರುಗಳ ಅಪರಾಧ ಸಾಬೀತಾಗದೆ ಅವರುಗಳನ್ನು ಬಿಡುಗಡೆ ಮಾಡಿ ತೀರ್ಪು ನೀಡಿರುತ್ತಾರೆ. 1ನೇ ಆರೋಪಿಯು ಮರಣಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿರುತ್ತದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಮೇಶ್ ರವರು ಸಮರ್ಥವಾಗಿ ವಾದ ಮಂಡಿಸಿರುತ್ತಾರೆ.
