ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ದಂಪತಿಗಳಿಬ್ಬರು ಸುಮಾರು 30 ಕೋಟಿ ರೂಪಾಯಿ ವಂಚನೆ ಎಸೆಗಿರುವ ಘಟನೆ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರಗಿ ನಗರದ ಗಾಂಧಿನಗರದ ಬಳಿ ದಂಪತಿಗಳಾದ ಉತ್ಕರ್ಷ ಹಾಗೂ ಸಾವಿತ್ರಿ ಎಂಬವರು ಬಿ.ಎಲ್ ಕಾಂಪ್ಲೆಕ್ಸ್ನಲ್ಲಿ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದರು. ಯುವಕ ಯುವತಿಯರನ್ನು ಗುರಿಯಾಗಿಸಿಕೊಂಡು ದಂಪತಿ ಸುಮಾರು 500ಕ್ಕೂ ಮಿಕ್ಕ ಜನರಿಗೆ ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಲಾಭ ನೀಡುವ ಆಮೀಷ ಒಡ್ಡಿ ಕೆಲವರಿಂದ 25 ಲಕ್ಷ ರೂ.ನಿಂದ ಹಿಡಿದು ಒಂದು ಕೋಟಿ ರೂ. ವರೆಗೂ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ದಂಪತಿಗೆ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬವರು ಸಹಾಯ ಮಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರು ದಾಖಲಾಗುತ್ತಿದ್ದಂತೆ ದಂಪತಿ ಅಪಾರ್ಟ್ಮೆಂಟ್ನಿಂದ ಸಂಬಂಧಿಕರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಸುಧಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
